ಬೆಂಗಳೂರು: ಧಾರವಾಡದಲ್ಲಿನ ಸಮಸ್ಯೆಯ ವಿಚಾರವೊಂದು ಅಲ್ಲಿನ ವಕೀಲರೊಬ್ಬರ ಮೂಲಕ ಬೆಂಗಳೂರಿಗೆ ತಲುಪಿ, ನಟ ಅನಿರುದ್ಧ ಅವರ ಕೈಸೇರಿದೆ. ಅವರು ಆ ವಕೀಲರ ಅಳಲಿಗೆ ದನಿಯಾಗಿದ್ದಷ್ಟೇ ಅಲ್ಲದೆ, ಈ ಕುರಿತು ಧಾರವಾಡ ಜಿಲ್ಲಾಧಿಕಾರಿಯವರು ಗಮನಹರಿಸಿ ಪರಿಹರಿಸಬೇಕು ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಧಾರವಾಡದ ಸಂಗಮೇಶ್ವರಿ ಮಠದ ಎಂಬ ವಕೀಲರೊಬ್ಬರು ತಮ್ಮ ಮನೆ ಸಮೀಪ ಉಂಟಾಗಿರುವ ಮಾನವನಿರ್ಮಿತ ಸಮಸ್ಯೆಯ ಕುರಿತ ವಿಚಾರವನ್ನು ನಟ ಅನಿರುದ್ಧ ಅವರಿಗೆ ಮೆಸೇಜ್ ಮಾಡಿ ಗಮನ ಸೆಳೆದಿದ್ದಾರೆ. ಅವರು ಅದರ ವಿವರವನ್ನು ಸೋಷಿಯಲ್ ಮೀಡಿಯಾ ಮೂಲಕ ಜನರ ಮುಂದಿಟ್ಟಿದ್ದಷ್ಟೇ ಅಲ್ಲದೆ ಧಾರವಾಡ ಜಿಲ್ಲಾಧಿಕಾರಿಯವರು ಗಮನ ಹರಿಸಬೇಕು ಎಂಬುದಾಗಿಯೂ ಕೋರಿಕೊಂಡಿದ್ದಾರೆ.
ಧಾರವಾಡದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ವ್ಯಸ್ತವಾಗಿದೆ. ಪ್ರಕೃತಿನಿರ್ಮಿತ ಸಮಸ್ಯೆಯನ್ನೇನೋ ಸಹಿಸಿಕೊಳ್ಳಬಹುದು. ಆದರೆ ಮಾನವನಿರ್ಮಿತ ಸಮಸ್ಯೆಗೆ ಕಾರಣರಾದವರನ್ನು ಪ್ರಶ್ನಿಸಬೇಕಲ್ಲವೇ? ಎಂದಿರುವ ಸಂಗಮೇಶ್ವರಿ ಅವರು ತಮ್ಮ ಪ್ರದೇಶದಲ್ಲಿನ ಸಮಸ್ಯೆ ಕುರಿತು ವಿವರಣೆ ನೀಡಿದ್ದಾರೆ. ನಾವು ಕೃಷಿ ವಿಶ್ವವಿದ್ಯಾಲಯದ ಎದುರಿಗಿನ ಸಾದುನವರ ಎಸ್ಟೇಟ್ನಲ್ಲಿ ಮನೆ ಕಟ್ಟಿಕೊಂಡು 15 ವರ್ಷಗಳಾದವು. ಆದರೆ ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಸಮಸ್ಯೆ ಉಂಟಾಗಿದೆ. ನಾಲ್ಕು ವರ್ಷದ ಹಿಂದೆ ಹೆದ್ದಾರಿ ಕಾಮಗಾರಿ ಶುರುವಾದಾಗಿನಿಂದ ಮತ್ತು ಮಲ್ಲಿಗೆವಾಡದ 1 ಸಾವಿರ ಎಕರೆ ಜಮೀನಿನಲ್ಲಿ ಕೆಎಚ್ಬಿಯವರು ಫ್ಲ್ಯಾಟ್ ಮಾಡಿದಾಗಿನಿಂದ ದೊಡ್ಡ ಹಳ್ಳವಾಗಿ ಭಾರಿ ಪ್ರಮಾಣದಲ್ಲಿ ನೀರು ಸೇರಿ ನಿಲ್ಲುತ್ತಿದೆ. ಅಲ್ಲಿ ಸಮಸ್ಯೆ ಪರಿಹಾರಕ್ಕೆ ರಾಜಕಾಲುವೆ ಆಗಬೇಕಾದ ಅಗತ್ಯವಿದೆ ಎಂದು ಸಂಗಮೇಶ್ವರಿ ಅವರು ಅಭಿಪ್ರಾಯ ಪಟ್ಟಿದ್ದನ್ನು ಅನಿರುದ್ಧ ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಧಾರಾವಾಡ ಜಿಲ್ಲಾಧಿಕಾರಿಯವರು ಗಮನಹರಿಸಿ ಸೂಕ್ತಕ್ರಮ ಜರುಗಿಸಲಿದ್ದಾರೆಯೇ ಎಂಬ ಕುರಿತು ಸಾರ್ವಜನಿಕರು ನಿರೀಕ್ಷೆಯಿಂದ ನೋಡುತ್ತಿದ್ದಾರೆ.