ಬೆಂಗಳೂರು: 16 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಕ್ರೇಜ್ ಜೋರಾಗಿದ್ದು, ಟಿಕೆಟ್ ಸೋಲ್ಡ್ ಔಟ್ ಎಂದು ಆಡಳಿತ ಮಂಡಳಿಯವರು ಹೇಳುತ್ತಿದಂತೆ ಆಕ್ರೋಶಗೊಂಡ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಲು ಯತ್ನಿಸಿದ್ದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಭಾನುವಾರ ಲಾಠಿ ಜಾರ್ಜ್ ಮಾಡಿ ಚದುರಿಸಿದ್ದಾರೆ.
ಐಪಿಎಲ್ನ ಬದ್ಧವೈರಿಗಳು ಎಂದೇ ಹೇಳಲಾಗುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ) ನಡುವೆ ಹೈವೋಲ್ಟೇಜ್ ಪಂದ್ಯ ಸೋಮವಾರ ನಡೆಯಲಿದ್ದು, ಇದರ ಆನ್ಲೈನ್ ಟಿಕೆಟ್ ಈ ಹಿಂದೆಯೇ ಸೋಲ್ಡ್ಔಟ್ ಆಗಿತ್ತು. ಆದರೆ ಆನ್ಲೈನ್ ಟಿಕೆಟ್ ಸಿಗಬಹುದೆಂದು ಅಭಿಮಾನಿಗಳು ಶನಿವಾರ ರಾತ್ರಿಯಿಂದಲೇ ಮೈದಾನ ಸುತ್ತ ಮುತ್ತ ಕಾದು ಕುಳಿತಿದ್ದರು. ಆದರೆ ಟಿಕೆಟ್ ಇಲ್ಲ ಎಂಬ ಬೋರ್ಡ್ ಪ್ರದರ್ಶಿಸುತ್ತಿದಂತೆ ಆಕ್ರೋಶಗೊಂಡ ಅಭಿಮಾನಿಗಳು ಮೊದಲು ಕ್ರೀಡಾಂಗಣದ ಸಿಬ್ಬಂದಿ ಜತೆಗೆ ಮಾತಿನ ಚಕಮಕಿ ನಡೆಸಿದ್ದರು.
ಇದನ್ನೂ ಓದಿ: ಕ್ರೀಡೆಯಲ್ಲೂ ಟಿಕೆಟ್ ಗೊಂದಲ; ಚಿನ್ನಸ್ವಾಮಿ ಕ್ರೀಡಾಂಗಣದ ಮುಂಬಾಗದಲ್ಲಿ RCB ನಾಮಜಪ!
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಟಿಕೆಟ್ ಖರೀದಿಸಿ ಪಂದ್ಯ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದ ಅಭಿಮಾನಿಗಳಿಗೆ ಟಿಕೆಟ್ ಸಿಗದೆ ನಿರಾಸೆಯಾಗಿದ್ದರಿಂದ ಕೆರಳಿದ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂ ಒಳಗೆ ನುಗ್ಗಲು ಯತ್ನಿಸಿದ್ದರು. ಅವರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಒಂದು ಹಂತದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.
ಬಾಕ್ಸ್ ಆಫೀಸ್ನಲ್ಲಿ ಟಿಕೆಟ್ ನೀಡುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಸಂದೇಶಗಳು ವೈರಲ್ ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳು ರಾತ್ರಿಯೇ ಸ್ಟೇಡಿಯಂ ಬಳಿ ಬಂದು ಕಾದು ಕುಳಿತಿದ್ದರು. ಟಿಕೆಟ್ ಸೋಲ್ಡ್ ಔಟ್ ಆಗಿದೆ ಎಂದು ಆಡಳಿತ ಮಂಡಳಿಯವರು ತಿಳಿಸುತ್ತಿದ್ದಂತೆ ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆಯಿತು. ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಠಿ ಚಾರ್ಚ್ ಮಾಡಿ ಅಭಿಮಾನಿಗಳನ್ನು ಚದುರಿಸಿ ಕ್ರೀಡಾಂಗಣಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ.
ಇದನ್ನೂ ಓದಿ: ಕರೊನಾದಿಂದ ಮೃತಪಟ್ಟಿದ್ದ ವ್ಯಕ್ತಿ ಎರಡು ವರ್ಷಗಳ ಬಳಿಕ ಪ್ರತ್ಯಕ್ಷನಾದ!
ಸಂಚಾರ ದಟ್ಟಣೆ
ಹೈವೋಲ್ಟೇಜ್ ಮ್ಯಾಚ್ಗೆ ಟಿಕೆಟ್ ಪಡೆಯಲು ಜನಸಾಗರವೇ ಹರಿದು ಬಂದಿತ್ತು. ಆಡಳಿತ ಮಂಡಳಿ ಸೋಮವಾರದ ಆರ್ಸಿಬಿ ಹಾಗೂ ಸಿಎಸ್ಕೆ ಮ್ಯಾಚ್ನ ಟಿಕೆಟ್ಗಾಗಿ ಶುಕ್ರವಾರ ಕೌಂಟರ್ ತೆರೆಯುವುದಾಗಿ ಹೇಳಿತ್ತು. ಹೀಗಾಗಿ ಗುರುವಾರ ರಾತ್ರಿಯಿಂದಲೇ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾದು ನಿಂತಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಒಂದೇ ಒಂದು ಟಿಕೆಟ್ ಕೂಡ ನೀಡದೆ ಸೋಲ್ಡ್ಔಟ್ ಎಂದಿ ಬೋರ್ಡ್ ಹಾಕಿದ್ದಾಗಲೂ ಅಭಿಮಾನಿಗಳು ಗರಂ ಆಗಿ ಗಲಾಟೆ ಮಾಡಿದ್ದರು. ನಂತರ ಬಂದ ದಾರಿಗೆ ಸುಂಕವಿಲ್ಲ ಎಂದು ಮನೆಗಳತ್ತ ತೆರೆಳಿದ್ದರು. ಆದರೆ ಭಾನುವಾರವಾದರೂ ಟಿಕೆಟ್ ಸಿಗಬಹುದೇನೋ ಎಂಬ ಆಸೆಯಿಂದ ಸ್ಟೇಡಿಯಂ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದರು. ಇತ್ತ ನೂರಾರು ಜನರು ಒಮ್ಮೆಲೆ ಆಗಮಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಬ್ಲ್ಯಾಕ್ನಲ್ಲಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಕಾಳ ಸಂತೆಯಲ್ಲಿ ಟಿಕೆಟ್ ಮಾರಾಟ!
ಒಂದೆಡೆ ಐಪಿಎಲ್ ಟಿಕೆಟ್ಗಳು ಜನಸಾಮಾನ್ಯರ ಕೈಗೆ ಸಿಗದಂತಾಗಿ ಅಭಿಮಾನಿಗಳ ಮೇಲೆ ಲಾಠಿಚಾರ್ಚ್ ಮಾಡಲಾಗಿದೆ. ಆದರೆ ಮತ್ತೊಂದೆಡೆ ಐಪಿಎಲ್ ಟಿಕೆಟ್ಗಳು ಕಾಳ ಸಂತೆಯಲ್ಲಿ ಎಗ್ಗಿಲ್ಲದೆ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ. ಆನ್ಲೈನ್ ಮತ್ತು ಆಫ್ಲೈನ್ನಲ್ಲಿ 1 ರಿಂದ 2.5 ಸಾವಿರ ರೂ.ವರೆಗೆ ಬೆಲೆ ಇರುವ ಟಿಕೆಟ್ಗಳು 10 ರಿಂದ 12 ಸಾವಿರದವರೆಗೂ ಮಾರಾಟವಾಗುತ್ತಿವೆ. ಇನ್ನು ಕೆಲವರು ತಮ್ಮ ಟ್ವಿಟರ್ ಖಾತೆಯಲ್ಲಿ ಟಿಕೆಟ್ಗಳು ಮಾರಾಟಕ್ಕೆ ಇವೆ ಎಂದು ಟಿಕೆಟ್ಗಳ ಪೋಟೋ ಸಮೇತ ಪೋಸ್ಟ್ ಮಾಡಿದ್ದಾರೆ. ಜನಸಾಮಾನ್ಯರ ಕೈಗೆ ಟಿಕೆಟ್ ಸಿಗದಂತೆ ಮಾಡಿರುವ ಈ ನಡೆ ಐಪಿಎಲ್ ಟಿಕೆಟ್ ಹಗರಣ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಈ ಸಂಬಂಧ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಬಂಗಾಳದ ಕಾರ್ಮಿಕನಿಗೆ ಕೇರಳದಲ್ಲಿ ಒಲಿಯಿತು ಅದೃಷ್ಟ; ಲಾಟರಿಯಲ್ಲಿ ಹಣ ಗೆಲ್ಲುತ್ತಿದ್ದಂತೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ!
ಇಷ್ಟೊಂದು ಕ್ರೇಜ್ ಏಕೆ?
ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿಗೆ ಸೋಮವಾರ ನಡೆಯಲಿರುವ ಪಂದ್ಯ ಕೊನೆಯ ಪಂದ್ಯವಾಗಲಿದೆ. ಅಲ್ಲದೇ ಧೋನಿ-ವಿರಾಟ್ ಕೊಹ್ಲಿ ಮುಖಾಮುಖಿಯಿಂದಲೂ ಈ ಪಂದ್ಯ ಭಾರಿ ಕುತೂಹಲ ಮೂಡಿಸಿದೆ. ಹೀಗಾಗಿಯೇ ತಮಿಳುನಾಡು ಸೇರಿ ವಿವಿಧ ರಾಜ್ಯಗಳಿಂದ ಅಭಿಮಾನಿಗಳು ಆಗಮಿಸಿ ಟಿಕೆಟ್ ಖರೀದಿಸಿ ಪಂದ್ಯ ವೀಕ್ಷಿಸಲು ಮುಗಿಬಿದ್ದಿದ್ದಾರೆ.