ಕಡಬ: ದಟ್ಟ ಅರಣ್ಯಗಳಲ್ಲಿ ಮಾತ್ರ ಕಾಣಸಿಗುವ ಅತೀ ಅಪೂರ್ವವಾದ ಲಂಗೂರ್ (ಮಂಗಗಳ ಜಾತಿಗೆ ಸೇರಿದ ವನ್ಯಜೀವಿ) ಮಂಗಳೂರು ವಿಮಾನ ನಿಲ್ದಾಣದ ಹತ್ತಿರದ ಕೆಂಜಾರು ಪ್ರದೇಶದಲ್ಲಿ ಕಂಡುಬಂದಿದ್ದು, ಹವ್ಯಾಸಿ ಯುವ ವನ್ಯಜೀವಿ ಛಾಯಗ್ರಾಹಕರಿಬ್ಬರು ಅವುಗಳ ಜೀವನ ಶೈಲಿ ಕುರಿತಾಗಿ ಅಧ್ಯಯನ ನಡೆಸಿ ‘ಅರ್ಬನ್ ಲಂಗೂರ್ ಇನ್ ಮಂಗಳೂರು’ ಸಾಕ್ಷೃಚಿತ್ರ ಸಿದ್ಧಪಡಿಸಿದ್ದಾರೆ.
ಕೆಂಜಾರು ಪ್ರದೇಶದಲ್ಲಿ ಕಂಡುಬಂದಿರುವ ಲಂಗೂರ್, ಅವುಗಳ ಜೀವನಶೈಲಿ, ಸಂತಾನಾಭಿವೃದ್ಧಿ ಹಾಗೂ ಆಹಾರ ಪದ್ಧತಿಯ ಮಾಹಿತಿಯನ್ನು ಒಳಗೊಂಡ ಸಾಕ್ಷೃಚಿತ್ರ ನಿರ್ಮಿಸಿದವರು ನಿಟ್ಟೆ ಕಾಲೇಜ್ ಆಫ್ ಆರ್ಕಿಟೆಕ್ಟ್ನಲ್ಲಿ ತೃತೀಯ ವರ್ಷದ ವಿದ್ಯಾರ್ಥಿಯಾಗಿರುವ ಸಾತ್ವಿಕ್ ಪಿ.ಎಸ್. ಪಣೆಮಜಲು ಹಾಗೂ ಮಣಿಪಾಲದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯಾಗಿರುವ ಧ್ಯಾನ್ ಸಿ.ಕೆ. ಚೆಟ್ಟಿಮಾಡ.
ಸ್ಥಳೀಯರ ಮಾಹಿತಿಯಂತೆ 5-6 ವರ್ಷಗಳ ಈಚೆಗೆ ಕೆಂಜಾರು ಪ್ರದೇಶದಲ್ಲಿ ಈ ಅಪರೂಪದ ವನ್ಯಜೀವಿ ಕಂಡುಬಂದಿದೆ. ಸಾಮಾನ್ಯವಾಗಿ ಈ ಜಾತಿಯ ಲಂಗೂರ್ ಗಳು ಕರಾವಳಿ ತೀರದ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತವೆ ಎಂದು ಸಾತ್ವಿಕ್ ಹೇಳುತ್ತಾರೆ. ಪ್ರಸ್ತುತ ಈ ವನ್ಯಜೀವಿ ವಾಸಿಸುವ ಪ್ರದೇಶವು ವಿಮಾನ ನಿಲ್ದಾಣದ ಸಮೀಪವಿರುವ ಕಾರಣ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಬೆಟ್ಟಗುಡ್ಡಗಳನ್ನು ಒಳಗೊಂಡ ಈ ಅರಣ್ಯ ಪ್ರದೇಶವು ಅಭಿವೃದ್ಧಿ ಹೆಸರಿನಲ್ಲಿ ಪಟ್ಟಣ ಪ್ರದೇಶವಾಗಿ ಮಾರ್ಪಾಡಾಗುತ್ತಿದೆ. ಮುಂದಿನ ದಿನಗಳಲ್ಲಿ ಅಪೂರ್ವವಾದ ವನ್ಯಜೀವಿಯಾದ ಲಂಗೂರ್ ಸಂತತಿಯೂ ನಶಿಸಿ ಹೋಗುವಲ್ಲಿ ಯಾವುದೇ ಸಂಶಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ವನ್ಯಜೀವಿ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎನ್ನುವುದು ಸಾಕ್ಷೃಚಿತ್ರ ನಿರ್ಮಿಸಿದ ಯುವಕರ ಆಶಯ.
ವಿದ್ಯಾರ್ಥಿಗಳ ಹವ್ಯಾಸಿ ತಂಡ: ವಿದ್ಯಾರ್ಥಿಗಳೇ ಸೇರಿಕೊಂಡು ವನ್ಯಜೀವಿಗಳ ಬಗ್ಗೆ ಅಧ್ಯಯನ, ಛಾಯಾಗ್ರಹಣ ಇತ್ಯಾದಿ ಚಟುವಟಿಕೆಗಳಿಗಾಗಿ ಕಟ್ಟಿಕೊಂಡ ತಂಡವು ಈ ಸಾಕ್ಷೃಚಿತ್ರದ ನಿರ್ಮಾಣದಲ್ಲಿ ದುಡಿದಿದೆ. ಛಾಯಾಗ್ರಾಹಕರಾಗಿ ಸಾತ್ವಿಕ್, ಧ್ಯಾನ್ ಮತ್ತು ರಾಕೇಶ್, ಸಂಕಲನದಲ್ಲಿ ಸಿದ್ಧಾರ್ಥ್ ಶೆಟ್ಟಿ, ಅನ್ವಿತ್ ಬದಿಕಾನ, ಡ್ರೋಣ್ ಚಿತ್ರೀಕರಣದಲ್ಲಿ ಸೃಜನ್ ಯು. ಕೆಲಸ ಮಾಡಿದ್ದಾರೆ.