ಮಡಿಕೇರಿ: ರಣಭೀಕರ ಮಳೆಗೆ ಬೆಟ್ಟ ಕುಸಿದು ನಾಪತ್ತೆಯಾಗಿದ್ದ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಸೇರಿ ಐವರು ನಾಪತ್ತೆಯಾಗಿದ್ದವರ ಪೈಕಿ ಒಬ್ಬರ ಮೃತದೇಹ ಪತ್ತೆ ಶನಿವಾರ ಪತ್ತೆಯಾಗಿದೆ.
ಮೂರು ದಿನಗಳ ಹಿಂದೆ ಬ್ರಹ್ಮಗಿರಿ ಬೆಟ್ಟಗಳ ಸಾಲಿನ ಗಜಗಿರಿ ಬೆಟ್ಟ ಕುಸಿದು ಮನೆಗಳು ನಾಮಾವೇಶಗೊಂಡಿದ್ದವು. ಅಲ್ಲಿದ್ದ ನಾರಾಯಣಾಚಾರ್ ಕುಟುಂಬಸ್ಥರು ನಾಪತ್ತೆಯಾಗಿದ್ದರಿಂದ ಶೋಧ ಕಾರ್ಯ ನಡೆಯುತ್ತಿದೆ. ಬೆಟ್ಟ ಕುಸಿದು ಭೂಸಮಾಧಿಯಾಗಿದ್ದ ನಾರಾಯಣಾಚಾರ್ರ ಹಿರಿಯ ಸಹೋದರ ಸಹೋದರ ಆನಂದತೀರ್ಥ ಸ್ವಾಮೀಜಿ (86) ಅವರ ಮೃತದೇಹ ಶನಿವಾರ ಎನ್ಡಿಆರ್ಎಫ್ ಶೋಧ ಕಾರ್ಯಾಚರಣೆಯಲ್ಲಿ ಸಿಕ್ಕಿದೆ.
ಇದನ್ನೂ ಓದಿರಿ ಕೃಷ್ಣಾ ನದಿಯ ಭೀಕರ ಪ್ರವಾಹಕ್ಕೆ ಸಿಲುಕಿದ ಕುರಿಗಾಹಿ, 200 ಕುರಿಗಳು
ಶನಿವಾರ ಬೆಳಗ್ಗೆ 11 ಗಂಟೆಗೆ ಎನ್ಡಿಆರ್ಎಫ್ ತಂಡದವರು ಅಗ್ನಿಶಾಮಕ ತಂಡದೊಂದಿಗೆ ಶೋಧ ಕಾರ್ಯ ಪ್ರಾರಂಭಿಸಿದರು. ಅದಕ್ಕೂ ಮೊದಲು ಜೆಸಿಬಿ ಮೂಲಕ ಮನೆ ಇದ್ದ ಸ್ಥಳದವರೆಗೂ ನಡೆದುಕೊಂಡು ಹೋಗಲು ದಾರಿ ಮಾಡಲಾಯಿತು. ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಯಿತು.
ಮನೆ ಇದ್ದ ಸ್ಥಳದಿಂದ ಹತ್ತು ಅಡಿ ದೂರದಲ್ಲಿ, ನಾಲ್ಕು ಅಡಿ ಆಳದಲ್ಲಿ ಮಣ್ಣಿನೊಳಗೆ ಆನಂದತೀರ್ಥ ಅವರ ದೇಹ ಪತ್ತೆಯಾಯಿತು. ಅವಘಡ ಸಂಭವಿಸಿ ಮೂರು ದಿನ ಕಳೆದಿರುವುದರಿಂದ ದೇಹದಿಂದ ವಾಸನೆ ಬರುತ್ತಿತ್ತು. ಇದರೊಂದಿಗೆ 1 ಚೀಲದಲ್ಲಿದ್ದ ಕಾಯಿನ್ ಪತ್ತೆಯಾಗಿದೆ. ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಟಿ.ಎಸ್. ನಾರಾಯಣಾಚಾರ್, ಅವರ ಪತ್ನಿ ಶಾಂತಾ, ಸಹಾಯಕ ಅರ್ಚಕರಾದ ರವಿಕಿರಣ್ ಮತ್ತು ಶ್ರೀನಿವಾಸ್ರ ಪತ್ತೆ ಕಾರ್ಯ ಭಾನುವಾರ ಮುಂದುವರಿಯಲಿದೆ.
ಆನಂದತೀರ್ಥ ಸ್ವಾಮೀಜಿ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ತಲಕಾವೇರಿ ಕ್ಷೇತ್ರದಿಂದ 2 ಕಿ.ಮೀ. ದೂರದಲ್ಲಿರುವ ಬಟ್ಟೆಕಾಡು ಜಾಗದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಟಿ.ಎಸ್. ನಾರಾಯಣಾಚಾರ್ ಅವರ ಇಬ್ಬರು ಪುತ್ರಿಯರು ಆಸ್ಟ್ರೆಲಿಯಾದಲ್ಲಿ ನೆಲೆಸಿದ್ದಾರೆ. ಶನಿವಾರ ಕರೊನಾ ವೈದ್ಯಕಿಯ ಪರೀಕ್ಷೆ ನಡೆಸಿದ್ದು, ಭಾನುವಾರ ಭಾರತಕ್ಕೆ ಆಗಮಿಸಲಿದ್ದಾರೆ. ಸಹೋದರಿ ಸುಶೀಲಾ ಮಂಗಳೂರಿನಿಂದ ಆಗಮಿಸಿದ್ದು, ಸಹೋದರ ಆನಂದತೀರ್ಥ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ತಲಕಾವೇರಿಯಲ್ಲಿ ಭಾರೀ ಪ್ರಮಾಣದ ಭೂಕುಸಿತ: 2 ಮನೆ ಮಣ್ಣುಪಾಲು, ಐವರು ನಾಪತ್ತೆ, 20 ಹಸುಗಳ ಸಾವು