ಚಿಕ್ಕಮಗಳೂರು: ಅರಣ್ಯವನ್ನು ಒತ್ತುವರಿ ಮಾಡಿ ಕಾಫಿ ತೋಟ ನಿರ್ಮಾಣ ಮಾಡಿಕೊಂಡಿರುವ ಶ್ರೀಮಂತ ಭೂ ಹಿಡುವಳಿದಾರರಿಗೆ ಮತ್ತೆ 10 ಎಕರೆವರೆಗೆ ಒತ್ತುವರಿ ಭೂಮಿಯನ್ನು ಲೀಸ್ಗೆ ನೀಡಲು ನಿರ್ಧಾರ ಮಾಡಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ‘ಶ್ರೀಮಂತರಿಗೆ ಭೂಮಿ ಲೀಸ್, ಬಡವರಿಗೆ ಮಂಕುಬೂದಿ’ ಎಂಬ ಘೋಷಣೆಯೊಂದಿಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಭೂ ಹಕ್ಕು ಹೋರಾಟ ಸಮಿತಿಯಿಂದ ಜಾಥಾ, ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅಂಬೇಡ್ಕರ್ ವೈಚಾರಿಕ ವೇದಿಕೆ ಜಿಲ್ಲಾಧ್ಯಕ್ಷ ಮಂಜು ಕೂದುವಳ್ಳಿ ತಿಳಿಸಿದರು.
ಜಿಲ್ಲೆ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭೂಮಾಲೀಕರಿಗೆ 10 ಎಕರೆವರೆಗೂ ಭೂಮಿ ಲೀಸ್(ಗುತ್ತಿಗೆ) ಕೊಡಲು ಹೊರಟಿರುವ ರಾಜ್ಯ ಸರ್ಕಾರದ ಶ್ರಮವನ್ನು ಸಮಿತಿಯು ಖಂಡಿಸುತ್ತದೆ. ಕೂಡಲೇ ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮಲೆನಾಡಿನ ಜಿಲ್ಲೆಗಳಲ್ಲಿ ಭೂ ಒತ್ತುವರಿ ಸಮಸ್ಯೆ ಗಂಭೀರವಾಗಿದೆ. ಬಡವರು, ಸಣ್ಣ, ಮಧ್ಯಮ ರೈತರು ಹೆಚ್ಚೆಂದರೆ 3-4 ಎಕರೆ ಒತ್ತುವರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ 10-20 ಎಕರೆ ತೋಟವಿದ್ದ ಪ್ಲಾಂಟರುಗಳು ತಮ್ಮ ಜಮೀನಿನ ಸುತ್ತಾ ಅದಕ್ಕೆ ಹೊಂದಿಕೊಂಡಿರುವ 10, 50, 100 ಎಕರೆಗೂ ಹೆಚ್ಚು ಗುಡ್ಡಗಳನ್ನು ಒತ್ತುವರಿ ಮಾಡಿದ್ದಾರೆ ಎಂದು ದೂರಿದರು.
ಇಂತಹ ಭೂಮಾಲೀಕರ ಅಕ್ರಮ ಸಾಗುವಳಿಗೆ 10 ಎಕರೆವರೆಗೂ ಲೀಸ್ ಕೊಡಲು ಸರ್ಕಾರ ಹೊರಟಿದೆ. ಅದೇ ವೇಳೆಯಲ್ಲಿ ಬಡವರು, ಸಣ್ಣ, ಅತೀ ಸಣ್ಣ ರೈತರು ಸಾಗುವಳಿ ಮಾಡಿಕೊಂಡ ಜಮೀನು ಬಗ್ಗೆ ಸರ್ಕಾರ ಯಾವ ನಿರ್ಣಯವನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಈ ನಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಹೋರಾಟ ಮುಂದುವರಿಸುತ್ತೇವೆ. ಆದ್ದರಿಂದ ಜಿಲ್ಲೆಯ ಪ್ರಗತಿಪರ ಸಂಘಟನೆಯ ಮುಖಂಡರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ವಿವಿಧ ದಲಿತ ಪ್ರಗತಿಪರ ಸಂಘಟನೆಗಳ ಮುಖಂಡರಾದ ಮರ್ಲೆ ಅಣ್ಣಯ್ಯ, ಶ್ರೀನಿವಾಸ್ ದಂಟರಮಕ್ಕಿ, ಕೃಷ್ಣಮೂರ್ತಿ, ಐ.ಎಂ ಪೂರ್ಣೇಶ್, ಹರೀಶ್ ನಲಿಕೆ, ಸುರೇಶ್, ರಮೇಶ್, ಹೊನ್ನೇಶ್, ಉಮೇಶ್ಕುಮಾರ್ ಮತ್ತಿತರರಿದ್ದರು.