ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕೂಲಂಕಷವಾಗಿ ಮನವರಿಕೆ ಮಾಡಿಕೊಡುವಲ್ಲಿ ಸಮನ್ವಯ ಕೊರತೆ ಆಗಿರುವುದೇ ಗೊಂದಲಕ್ಕೆ ಕಾರಣ ಎಂದು ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ ಹೇಳಿದರು.
ಭಾರದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಹಾಗಾಗಿ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ಇಲ್ಲಿನ ಮುಸ್ಲಿಮರು ಸೇರಿ ಇನ್ಯಾರಿಗಾದರೂ ತೊಂದರೆಯಾದರೆ ಅವರೊಂದಿಗೆ ತಾವು ನಿಲ್ಲುವುದಾಗಿ ಯರಮರಸ್ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಯೋಧ್ಯೆಯ ಶ್ರೀ ರಾಮಮಂದಿರ ವ್ಯಾಜ್ಯ ಪೂರ್ವದಲ್ಲಿ 1200 ಮುಸ್ಲಿಂ ಸಂಸ್ಥೆಗಳು, ಇಮಾಮರು, ಮೌಲ್ವಿಗಳು ಮತ್ತು ಬುದ್ಧಿವಂತರನ್ನು ಸಂಪರ್ಕಿಸಿ, ಸಮನ್ವಯ ಸಾಧಿಸಿದ್ದರಿಂದ ನ್ಯಾಯಾಲಯದ ತೀರ್ಪು ಬಂದ ನಂತರ ಎಲ್ಲೂ ಗಲಾಟೆ ನಡೆಯಲಿಲ್ಲ. ಅದರಂತೆ ಸಿಎಎ ವಿರೋಧಿಸುವವರು, ಆತಂಕದಲ್ಲಿರುವವರನ್ನು ಪೂರ್ವದಲ್ಲೇ ಭೇಟಿಯಾಗಿ, ತಿದ್ದುಪಡಿಯ ಉದ್ದೇಶ, ಕಾಯ್ದೆಯಲ್ಲಿರುವ ಸತ್ಯಾಂಶಗಳನ್ನು ತಿಳಿಸಬೇಕಿತ್ತು. ಈ ಹಂತದಲ್ಲಿ ಎಡವಲಾಗಿದೆ. ಆಯೋಧ್ಯೆ ಟ್ರಸ್ಟ್ ರಚಿಸುವ ತೀರ್ಮಾನದ ಬಗ್ಗೆ ಮಾಹಿತಿ ಇಲ್ಲ. ನ್ಯಾಯಾಲಯದ ಆದೇಶದಂತೆ ಸರ್ಕಾರ ನಡೆದುಕೊಳ್ಳುವ ವಿಶ್ವಾಸ ಇದೆ ಎಂದರು.