ಶಿವಮೊಗ್ಗ: ಕುವೆಂಪು ವಿವಿಯ ನೂತನ ಶೈಕ್ಷಣಿಕ ವೇಳಾಪಟ್ಟಿ ಖಂಡಿಸಿ ಮತ್ತು ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ವಿವಿಯ ಕುವೆಂಪು ಶತಮಾನೋತ್ಸವ ಭವನ ಎದುರು ಪ್ರತಿಭಟನೆ ನಡೆಸಿದರು.
ಗುರುವಾರ ನೂತನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದ್ದು ಪದವಿಯ 4 ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆ.30ರಂದು ಪ್ರಸಕ್ತ ಸೆಮಿಸ್ಟರ್ನ ಕೊನೆ ದಿನ ಹಾಗೂ ಸೆಪ್ಟಂಬರ್ 7ರಿಂದ ಪರೀಕ್ಷೆಗಳನ್ನು ಘೋಷಣೆ ಮಾಡಲಾಗಿದೆ. ಪ್ರಸಕ್ತ ಸೆಮಿಸ್ಟರ್ನ ವಿದ್ಯಾರ್ಥಿಗಳಿಗೆ ತರಗತಿಗಳು ಜೂನ್ನಿಂದ ಆರಂಭವಾಗಿದೆ. ಇದರಿಂದ ಈ ಸೆಮಿಸ್ಟರ್ನ ವಿದ್ಯಾರ್ಥಿಗಳಿಗೆ ತರಗತಿಗಳ ಅವಧಿ ಕಡಿಮೆಯಾಗಿದ್ದು, ಪಾಠ-ಪ್ರವಚನಗಳು ಸಂಪೂರ್ಣಗೊಳ್ಳದೆ, ತೊಂದರೆ ಅನುಭವಿಸುವಂತಾಗಿದೆ. ಒತ್ತಡದಲ್ಲಿ ಪರೀಕ್ಷೆ ಬರಯಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ, 2ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು ಸಹ ಇದೇ ರೀತಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿವಿಯ ಪದವಿ ವಿದ್ಯಾರ್ಥಿಗಳಿಗೆ ನೂತನವಾಗಿ ಹೊರಡಿಸಿರುವ ವೇಳಾಪಟ್ಟಿಯನ್ನು ಹಿಂಪಡೆದು ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಎನ್ಪಿಎಸ್ ಮೊದಲನೇ ವರ್ಷದ ಬಿ.ಕಾಂ, ಬಿಸಿಎ, ಬಿಬಿಎ, ಬಿಎಸ್ಡಬ್ಲುೃ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿದೆ. ಎಬಿವಿಪಿ ಪ್ರತಿಭಟನೆಗೆ ಮಣಿದು 300 ರೂ. ಕಡಿಮೆ ಮಾಡಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತಷ್ಟು ಶುಲ್ಕ ಕಡಿಮೆ ಮಾಡುವಂತೆ ಆಗ್ರಹಿಸಿದರು. ಜಿಲ್ಲಾ ಸಂಚಾಲಕ ಮನು, ಸಹ ಸಂಚಾಲಕ ಎಂ.ಆರ್.ಗ್ರಹಿಕ್, ವಿನಯ್ ಗೌಡರ್, ದರ್ಶನ್, ಶರಣಪ್ಪ, ರಘುನಂದನ್, ರವಿ, ಅಭಿ, ವಿಧಾತ್ರಿ, ರೇವತಿ ಪ್ರತಿಭಟನೆಯಲ್ಲಿದ್ದರು.