ಬೆಟ್ಟದಪುರ: ರಾಷ್ಟ್ರಕವಿ ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಸುಧಾರಣೆಗೆ ಕುವೆಂಪು ಅವರು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಸೇವೆ ಸಲ್ಲಿಸಿದ್ದಾರೆ. ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಸಾಹಿತ್ಯವನ್ನು ಎತ್ತರದ ಮಟ್ಟಕ್ಕೆ ಕೊಂಡೊಯ್ದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
ಬೆಟ್ಟದಪುರ ವ್ಯಾಪ್ತಿಗೆ ಸುಮಾರು 30 ಪಂಚಾಯಿತಿಗಳು ಬರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ಬೆಟ್ಟಕ್ಕೆ ನೀರಿನ ಟ್ಯಾಂಕ್ ಅಳವಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಈ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುತ್ತಿನಮುಳಸೋಗೆಯ ಕೆರೆ ತುಂಬಿಸುವ ಯೋಜನೆ ಸಂಪೂರ್ಣವಾಗಿದೆ. ಇದರ ಉದ್ಘಾಟನೆಯನ್ನು ಜನವರಿ 25ಕ್ಕೆ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದರು.
ಕಸಾಪ ನಿಕಟ ಪೂರ್ವ ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿ, ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯತೆ, ಪೂರ್ಣ ದೃಷ್ಟಿಯ ಪಂಚಮಂತ್ರಗಳನ್ನು ಸಾರಿದ ಕುವೆಂಪು ಅವರು ವಿಶ್ವ ಕಂಡ ಅದ್ವಿತೀಯ ಸಾಹಿತಿ. ವಿಶ್ವ ಮಾನವ ಸಂದೇಶ ಸಾರಿದ ಅವರು ಮನುಕುಲದ ಉದ್ಧಾರ ಮಾಡುವ ನಿಟ್ಟಿನಲ್ಲಿ ಶ್ರೇಷ್ಠ ಸಾಹಿತ್ಯ ರಚಿಸಿದರು. ಕನ್ನಡದಲ್ಲಿ ಮಹಾಕಾವ್ಯ ರಚಿಸುವ ಮೂಲಕ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ವಿಶ್ವದ ಮೇರುಪಂಕ್ತಿಯ ಸಾಹಿತಿ ಎಂದರು.
ಸಚಿವರಿಗೆ ಮನವಿ: ಪಿರಿಯಾಪಟ್ಟಣದ ರಸ್ತೆ, ವೃತ್ತಗಳಿಗೆ ಸರ್ಕಾರವು ಮಹನೀಯರು, ಕವಿಗಳು, ತಾಲೂಕಿನ ಕವಿಗಳ ಹೆಸರಿಡಲು ಆದೇಶಿಸಿದ್ದು, ಅದರಂತೆ ನಾಮಕರಣ ಮಾಡಲು ಹಾಗೂ ಸಾಹಿತ್ಯ ಭವನ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಲು ಮನವಿ ಮಾಡಿದರು. ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸಿ.ಗಿರೀಶ್, ಉಪಾಧ್ಯಕ್ಷೆ ವೀಣಾ, ಮುಖಂಡರಾದ ಅನಿತಾ ತೋಟಪ್ಪಶೆಟ್ಟಿ, ಸರಸ್ವತಿ, ನಿರೂಪ ರಾಜೇಶ್, ಕುಂಜಪ್ಪ ಕಾರ್ನಾಡ್, ಮಹದೇವ್, ಗಂಗಣ್ಣ, ಸಣ್ಣ ಸ್ವಾಮಿಗೌಡ, ಮರಿಯಪ್ಪ, ಪುಟ್ಟರಾಜು, ಭೀಮಣ್ಣ, ಜಗದೀಶ್, ರಾಜು, ತಹಸೀಲ್ದಾರ್ ಕುಂಇ ಅಹಮದ್, ತಾಲೂಕು ಪಂಚಾಯಿತಿ ಸುನೀಲ್ ಕುಮಾರ್, ಪಿಡಿಒ ಮಂಜುನಾಥ್ ಮತ್ತಿತರರಿದ್ದರು.