More

    ಉನ್ನತ ಶಿಕ್ಷಣಕ್ಕಿದೆ ಸಶಕ್ತ ಸಂಪನ್ಮೂಲ ರೂಪಿಸುವ ಶಕ್ತಿ

    ಶಿವಮೊಗ್ಗ: ದೇಶದ ಯುವ ಸಮೂಹವನ್ನು ಉತ್ತಮ ಗುಣಮಟ್ಟದಿಂದ ಕೂಡಿದ ಮಾನವ ಸಂಪನ್ಮೂಲವಾಗಿ ರೂಪಿಸಬಲ್ಲ ಸಾಮರ್ಥ್ಯವಿರುವುದು ಉನ್ನತ ಶಿಕ್ಷಣಕ್ಕೆ ಮಾತ್ರ. ಅದನ್ನು ಸಾಧಿಸುವ ಸಶಕ್ತ ಸಾಧನವೇ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಎಂದು ಬೆಂಗಳೂರಿನ ಕ್ರಿಸ್ತ ಜಯಂತಿ ಕಾಲೇಜಿನ ವಾಣಿಜ್ಯ ನಿಖಾಯದ ಡೀನ್ ಡಾ. ಅಲೋಶಿಯಸ್ ಜೆ.ಎಡ್ವರ್ಡ್ ಹೇಳಿದರು.

    ಕುವೆಂಪು ವಿವಿಯ ಆಂತರಿಕ ಗುಣಮಟ್ಟ ಖಾತ್ರಿ ಘಟಕದಿಂದ ಶನಿವಾರ ವಿವಿಯ ಸ್ನಾತಕೋತ್ತರ ಅಧ್ಯಾಪಕರಿಗೆ ಏರ್ಪಡಿಸಿದ್ದ ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, 2024ರಲ್ಲಿ ದೇಶದ ಶೇ.57 ಜನಸಂಖ್ಯೆ ದುಡಿಯುವ ವಯೋಮಾನದಲ್ಲಿರುವ ಜನರನ್ನು ಒಳಗೊಂಡಿದೆ. ಉನ್ನತ ಶಿಕ್ಷಣವು ವಿವಿಧ ಕಾರ್ಯಕ್ರಮಗಳ ಮೂಲಕ ಇವರಿಗೆ ಗುಣಮಟ್ಟದ ಶಿಕ್ಷಣ, ಕೌಶಲಗಳನ್ನು ನೀಡಿದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂದರು.
    ಎನ್‌ಇಪಿಯು ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಸಾಮರ್ಥ್ಯಗಳನ್ನು ರೂಢಿಸಲು ಪ್ರಯತ್ನಿಸುತ್ತಿದೆ. ಯಾವುದೆ ವಿಷಯಗಳನ್ನು ನೆನಪಿಡುವ ಶಕ್ತಿ, ಅರ್ಥೈಸುವಿಕೆ, ವಿಶ್ಲೇಷಣೆ, ತರ್ಕ, ಅನ್ವಯಿಸುವಿಕೆ, ಮೌಲ್ಯಮಾಪನ ಮತ್ತು ಹೊಸದನ್ನು ಉತ್ಪಾದಿಸುವ ಸಾಮರ್ಥ್ಯಗಳನ್ನು ಬೆಳೆಸುವ ಗುರಿ ಹೊಂದಿದೆ ಎಂದು ಹೇಳಿದರು.
    ಶಿಕ್ಷಕರು ಸ್ವಸಾಮರ್ಥ್ಯವನ್ನು ಸಾಬೀತುಪಡಿಸಲು ನ್ಯಾಕ್ ಸಹಾಯಕವಾಗಲಿದೆ. ಮುಂದಿನ ಹಂತದಲ್ಲಿ ವಿದ್ಯಾರ್ಥಿಗಳಿಗೆ ಇದನ್ನು ದಾಟಿಸಿದಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ದೇಶದ ಆರ್ಥಿಕ, ಸಾಮಾಜಿಕ ಚಲನೆ, ಒಟ್ಟು ಉತ್ಪಾದಕತ್ವಗಳು ಹೆಚ್ಚಾಗುವ ಮೂಲಕ ದೇಶದ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.
    ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಶಿಕ್ಷಕರ ಆದ್ಯತೆ ವಿದ್ಯಾರ್ಥಿಗಳು, ಬೋಧನೆ ಮತ್ತು ಸಂಶೋಧನೆ ಆಗಿರಬೇಕು. ಹೆಚ್ಚು ಲೇಖನಗಳು, ಪ್ರಾಜೆಕ್ಟ್‌ಗಳು ಮತ್ತು ಪೇಟೆಂಟ್‌ಗಳನ್ನು ಪಡೆಯಲು ಪ್ರಯತ್ನಿಸಬೇಕು. ಇದು ಸಹಜವಾಗಿ ವಿವಿಗೆ ಉತ್ತಮ ರ‌್ಯಾಂಕಿಂಗ್ ಒದಗಿಸಲಿದೆ. ಒಟ್ಟಾರೆಯಾಗಿ ವಿವಿ ವ್ಯಾಪ್ತಿಯ ಕ್ಯಾಂಪಸ್ ಹಾಗೂ ಕಾಲೇಜುಗಳಲ್ಲಿ ಉತ್ತಮ ಬೌದ್ಧಿಕ ಸಾಮರ್ಥ್ಯ ಬೆಳೆಯಲಿ ಮತ್ತು ಹೀಗೆಯೆ ವಿವಿಯು ಗುರುತಿಸಿಕೊಳ್ಳುವಂತಾಗಲಿ ಎಂದು ಸಲಹೆ ನೀಡಿದರು.
    ಕುಲಸಚಿವ ಎ.ಎಲ್.ಮಂಜುನಾಥ್, ಐಕ್ಯುಎಸಿ ನಿರ್ದೇಶಕ ಪ್ರೊ. ಎನ್.ಬಿ.ತಿಪ್ಪೇಸ್ವಾಮಿ, ಸಂಪನ್ಮೂಲ ವ್ಯಕ್ತಿ ತುಮಕೂರು ವಿವಿಯ ಡಾ.ಶರತ್ಚಂದ್ರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts