ಶಿವಮೊಗ್ಗ: ಮಕ್ಕಳು ವಿದ್ಯಾಭ್ಯಾಸದಲ್ಲಿ ಪರಿಣತಿ ಹೊಂದುವ ಜತೆಗೆ ಸರ್ವತೋಮುಖ ಅಭಿವೃದ್ಧಿಗೆ ಸಂವಹನ ಕೌಶಲ ಅಳವಡಿಸಿಕೊಳ್ಳಬೇಕು ಎಂದು ಪ್ರವರ್ತನಾ ಸಂಸ್ಥೆ ಸಂಸ್ಥಾಪಕಿ ಪ್ರತಿಭಾ ಅರುಣ್ ಅಭಿಪ್ರಾಯಪಟ್ಟರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಭಾನುವಾರ ಏರ್ಪಡಿಸಿದ್ದ ಪರಿಣಾಮಕಾರಿ ಭಾಷಣ ಕಲೆ ವಿಷಯದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ವಸ್ತುಗಳಿಗೂ ಅದರದೇ ಮೌಲ್ಯ ಇರುತ್ತದೆ. ವಜ್ರ ಭೂಮಿಯೊಳಗಿದ್ದಾಗ ಬೇರೆಯದೇ ಮೌಲ್ಯ. ಅದಕ್ಕೆ ಸೂಕ್ತ ರೂಪ ನೀಡಿದಾಗ ಮೌಲ್ಯ ಹೆಚ್ಚುತ್ತದೆ. ಅದೇ ರೀತಿ ನಮ್ಮಲ್ಲೂ ಬದಲಾವಣೆಗಳು ಅವಶ್ಯ ಎಂದರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಡಾ. ಲಲಿತಾ ಭರತ್ ಮಾತನಾಡಿ, ವಿದ್ಯಾಭ್ಯಾಸದ ಜತೆಗೆ ಸಾಮಾನ್ಯ ಜ್ಞಾನ, ಭಾಷಣ ಕಲೆ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಜೆಸಿಐ ತರಬೇತುದಾರರಾದ ಮಮತಾ ಶಿವಣ್ಣ, ಕಾರ್ಯದರ್ಶಿ ಜಿ.ಗಣೇಶ್, ಪ್ರಮುಖರಾದ ಕಿಶೋರ್, ಮಮತಾ ರಾಮಸ್ವಾಮಿ, ರೋಟರಿ ಮಾಜಿ ಸಹಾಯಕ ಗೌರ್ನರ್ ಜಿ.ವಿಜಯಕುಮಾರ್ ಮುಂತಾದವರಿದ್ದರು.