ಕುಷ್ಟಗಿ: ಪಟ್ಟಣದ ಶಾಖಾಪುರ ರಸ್ತೆಗೆ ಹೊಂದಿಕಕೊಂಡಿರುವ 7ನೇ ವಾರ್ಡ್ನಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಹಾಗೂ ಗಿಡಗಂಟಿ ಬೆಳೆದಿದ್ದರೂ ತೆರವಿಗೆ ಪುರಸಭೆ ಮುಂದಾಗಿಲ್ಲ.
ಗಜೇಂದ್ರಗಡ ರಸ್ತೆಯಿಂದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ನಿವಾಸಕ್ಕೆ ಸಂಪರ್ಕಿಸುವ ರಸ್ತೆಯ ಅಕ್ಕ ಪಕ್ಕದ ಮನೆಗಳು ಈ ವಾರ್ಡ್ ವ್ಯಾಪ್ತಿಗೆ ಒಳಪಡುತ್ತಿವೆ. ಸರ್ಕಾರಿ ನೌಕರರೂ ಸೇರಿ ಸ್ಥಿತಿವಂತರು ವಾಸಿಸುವ ವಾರ್ಡ್ ಇದಾಗಿದ್ದು, ಸುಸಜ್ಜಿತ ಮನೆಗಳ ಸುತ್ತ ಕಸದ ತಿಪ್ಪೆಗಳು ಕಂಡುಬರುತ್ತಿವೆ. ಪುರಸಭೆಯ ತ್ಯಾಜ್ಯ ವಿಲೇವಾರಿ ವಾಹನ ಎರಡು ದಿನಕ್ಕೊಮ್ಮೆ ಬಂದು ಹೋಗುತ್ತದೆಯಾದರೂ ಕಸ ಸಂಗ್ರಹಿಸಿಡಲು ವ್ಯವಸ್ಥೆ ಕಲ್ಪಿಸದ ಕಾರಣ ನಿವಾಸಿಗಳು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಕಸ ಹೆಚ್ಚಾಗುತ್ತಿದ್ದಂತೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ವಾಹನ ವಾರ್ಡ್ನ ಅಲ್ಲಲ್ಲಿ ಕಂಡುಬರುವ ಕಸದ ಕಡೆ ಗಮನ ಹರಿಸುತ್ತಿಲ್ಲ. ಅಲ್ಲಲ್ಲಿ ಗುಂಪು ಗುಂಪಾಗಿ ಬೆಳೆದು ನಿಂತ ನಿರುಪಯುಕ್ತ ಗಿಡಗಳಿಂದ ವಿಷಜಂತುಗಳ ಕಾಟವೂ ಹೆಚ್ಚಾಗುತ್ತಿದೆ. ವಾರ್ಡ್ನ ಸ್ವಚ್ಛತೆಗೆ ಪುರಸಭೆ ಕ್ರಮ ಕೈಗೊಳ್ಳಬೇಕಿದೆ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.