ಕುರುಗೋಡು: ದವಸ ಧಾನ್ಯಗಳ ಸಂರಕ್ಷಣೆಗಾಗಿ ಸಬ್ಸಿಡಿ ದರದಲ್ಲಿ ತಾಡಪಾಲ್ ವಿತರಿಸಲಾಗುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ಕೃಷಿ ಅಧಿಕಾರಿ ಎಂ.ದೇವರಾಜ ಹೇಳಿದರು. ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ರೈತರಿಗೆ ಸಬ್ಸಿಡಿ ದರದಲ್ಲಿ ತಾಡಪಾಲ್ ವಿತರಿಸಿ ಮಾತನಾಡಿದರು.
ಕೃಷಿಕರಿಗೆ ಒಂದಿಲ್ಲೊಂದು ಕೆಲಸಗಳಿಗೆ ಅವಶ್ಯವಿರುವ ಗುಣಮಟ್ಟದ ತಾಡಪಾಲ್ ಮಾರುಕಟ್ಟೆ ಬೆಲೆಗೆ ಕೊಳ್ಳುವುದು ರೈತರಿಗೆ ಕಷ್ಟಸಾಧ್ಯ. ಹೀಗಾಗಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದರು.
ಕೃಷಿ ಇಲಾಖೆ ವಿವಿಧ ಯೋಜನೆಗಳಡಿ 2022-23ನೇ ಸಾಲಿನ ಸಹಾಯಧನದಡಿ ರೈತರಿಂದ ಅರ್ಜಿ ಸ್ವೀಕರಿಸಿ ಅರ್ಹರಿಗೆ ತಾಡಪಾಲ್ ವಿತರಿಸಲಾಯಿತು. ತಾಲೂಕಿನಲ್ಲಿ 18 ಸಾವಿರ ರೈತರಿದ್ದು, ಈ ಬಾರಿ ಕಡಿಮೆ ಸಂಖ್ಯೆಯ ತಾಡಪಾಲ್ ಬಂದಿರುವುದರಿಂದ ಕೆಲವರಿಗೆ ಮಾತ್ರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೃಷಿಕರಿಗೆ ಹಂಚುವ ಯೋಜನೆ ಇದೆ ಎಂದು ಹೇಳಿದರು.
ತಾಡಪಾಲ್ ಬೆಲೆ 2142 ರೂ. ಇದ್ದು, ಸಾಮಾನ್ಯ ವರ್ಗದ ರೈತರಿಗೆ ಶೇ.50 ಸಹಾಯಧನ ಸಿಗಲಿದೆ. ಅಂದರೆ 1071 ರೂ. ವಂತಿಕೆ ಕಟ್ಟಿ ತಾಡಪಾಲ್ ಪಡೆಯಬಹುದು ಎಂದು ತಿಳಿಸಿದರು.
ರೈತ ಅನುವುಗಾರರಾದ ಎ.ಕೆ.ಮಲ್ಲಪ್ಪ, ಹನುಮಂತ ರೆಡ್ಡಿ, ದೊಡ್ಡಬಸಪ್ಪ, ನರೇಂದ್ರ, ರಾಮಣ್ಣ, ಬಸವರಾಜ, ದೊಡ್ಡಬಸವ, ಬಾದನಹಟ್ಟಿ ರಾಮಾಂಜಿನಿ, ಗಾದಿಲಿಂಗಪ್ಪ, ಕೆರೆಕೆರೆ ಹನುಮಂತಪ್ಪ, ಮರೇಗೌಡ, ದೇವರೆಡ್ಡಿ ಬಾದನಹಟ್ಟಿ, ವೀರೇಶ್ ಇತರರಿದ್ದರು.