ಕುರುಗೋಡು: ಮಹಿಳೆಯರು ಸಂಸ್ಥೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ರೋಹಿತಾಕ್ಷ ಹೇಳಿದರು.
ಓರ್ವಾಯಿ ಗ್ರಾಪಂನ ಪಟ್ಟಣಸೆರಗು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಎಸ್ಕೆಡಿಆರ್ಡಿಪಿಯಿಂದ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಆಯೋಜಿಸಿದ್ದ ಮಲ್ಲಿಗೆ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಮಹಿಳೆಯರು ಮನೆ ಸುತ್ತ ಲಭ್ಯವಿರುವ ಸ್ಥಳದಲ್ಲಿ ಮಲ್ಲಿಗೆ ಸಸಿ ನಾಟಿ ಮಾಡಿ, ಬೆಳೆಸಿ ಅರ್ಥಿಕ ಮೂಲ ಕಂಡುಕೊಳ್ಳಬಹುದು ಎಂದರು.
ಪ್ರಗತಿಪರ ರೈತ ಕಂಪ್ಲಿಯ ಬಿ.ಎಂ.ಹರೀಶ್ ಮಾತನಾಡಿ, ಮನೆ ಸುತ್ತ್ತಲಿನ ಸ್ಥಳದಲ್ಲಿ 25 ರಿಂದ 30 ಮಲ್ಲಿಗೆ ಸಸಿ ನಾಟಿ ಮಾಡಬಹುದು. ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಬೆಳೆ ಬೆಳೆಸಬಹುದು. ಇಳುವರಿ ಆರಂಭಗೊಂಡ ನಂತರ ಮನೆಯ ಸದಸ್ಯರು ಹೂಗಳನ್ನು ಬಿಡಿಸಿ ಮಾರಾಟ ಮಾಡಬಹುದು. ಪ್ರತಿನಿತ್ಯ ಕನಿಷ್ಠ 2 ರಿಂದ 3 ಕೆ.ಜಿ. ಹೂವು ದೊರೆಯುತ್ತದೆ. ಹಬ್ಬದ ದಿನಗಳಲ್ಲಿ ಕೆಜಿ ಹೂವಿಗೆ ಒಂದು ಸಾವಿರ ರೂ.ವರೆಗೆ ಬೆಲೆ ಸಿಗಲಿದೆ. ಸಾಮಾನ್ಯ ದಿನಗಳಲ್ಲಿ 400 ರೂ.ವರೆಗೆ ದೊರೆಯಲಿದೆ ಎಂದರು.
ಎಸ್ಕೆಡಿಆರ್ಡಿಪಿ ತಾಲೂಕು ಯೋಜನಾಧಿಕಾರಿ ಹಾಲಪ್ಪ, ಗ್ರಾಪಂ ಸದಸ್ಯರಾದ ಗಂಗಮ್ಮ, ಗೋಪಾಲಕೃಷ್ಣ ಹಾಗೂ ಮಲ್ಲಿಕಾರ್ಜುನ ರೇಖಾ, ಲಲಿತಾ ಇತರರಿದ್ದರು.