More

    ಕುಂಟಾರು ಚೆಕ್‌ಡ್ಯಾಂ ಭರ್ತಿ

    ಪುರುಷೋತ್ತಮ ಭಟ್ ಬದಿಯಡ್ಕ

    ಪಯಸ್ವಿನಿ ನದಿಗೆ ಕುಂಟಾರಿನಲಿ ್ಲನಿರ್ಮಿಸಿರುವ ಚೆಕ್‌ಡ್ಯಾಂನಲ್ಲಿ ನೀರು ಭರ್ತಿಯಾಗಿದೆ. ಇದರಿಂದ ಈ ವರ್ಷ ಸ್ಥಳೀಯ ಅಗತ್ಯಗಳಿಗೆ ದೊಡ್ಡ ಪ್ರಮಾಣದ ನೀರಿನ ಕೊರತೆ ಉಂಟಾಗದು ಎಂಬ ಆಶಾಭಾವ ಮೂಡಿದೆ.

    ಕುಂಟಾರು ತೂಗುಸೇತುವೆಗಿಂತ 75 ಮೀ.ನಷ್ಟು ದೂರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು(ಚೆಕ್‌ಡ್ಯಾಂ) ನಿರ್ಮಿಸಲಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಕೆಲಸ ಪೂರ್ಣಗೊಂಡಿತ್ತು. ಈಗ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಫೈಬರ್ ಹಲಗೆಗಳ ಶಟರ್ ಹಾಕಲಾಗಿದ್ದು, ನೀರು ತುಂಬಿ ಅಣೆಕಟ್ಟಿನ ಮೇಲಿನಿಂದ ಹರಿಯುತ್ತಿದೆ. ನದಿಯಲ್ಲಿ 400 ಮೀ. ತನಕ ನೀರು ನಿಂತಿದೆ. ಅಣೆಕಟ್ಟಿನಲ್ಲಿ ಮೇ ತನಕ ನೀರು ತುಂಬಿಕೊಂಡಿದ್ದರೆ ಜನರಿಗೆ ಸಮಸ್ಯೆಯೇ ಎದುರಾಗದು.

    ಬೆಳ್ಳೂರಿಗೆ ಕುಂಟಾರಿನ ನೀರು: ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಕುಂಟಾರು ಡ್ಯಾಂನಿಂದ ಕುಡಿಯುವ ನೀರು ಪೂರೈಕೆಯಾಗಲಿದೆ. ವಿಶ್ವ ಬ್ಯಾಂಕ್ ನೆರವಿನೊಂದಿಗೆ ರಾಜ್ಯ ಸರ್ಕಾರ ಮತ್ತು ಗ್ರಾಪಂ ಆರ್ಥಿಕ ಸಹಾಯದೊಂದಿಗೆ ಯೋಜನೆ ಸಿದ್ಧವಾಗಿದೆ. ಬೆಳ್ಳೂರು ಗ್ರಾಪಂನ 13 ವಾರ್ಡ್‌ಗಳ 1,126 ಕುಟುಂಬಗಳಿಗೆ ಕುಡಿಯುವ ನೀರು ಒದಗಿಸುವ 7.37 ಕೋಟಿ ರೂ. ವೆಚ್ಚದ ಬೃಹತ್ ಕುಡಿಯುವ ನೀರಿನ ಯೋಜನೆ ಇದು. ಕುಂಟಾರು ದೇಗುಲ ಸಮೀಪ ಪಯಸ್ವಿನಿ ನದಿಯಿಂದ ನೀರು ಹಾಯಿಸಲು ಬೇಕಾದ ಟ್ಯಾಂಕ್ ನಿರ್ಮಾಣ, ಮೋಟಾರು ಜೋಡಣೆ, ಕೊಳವೆ ಜೋಡಿಸುವ ಕೆಲಸ ಪೂರ್ಣಗೊಂಡು ವರ್ಷಗಳು ಕಳೆದರೂ ಪಯಸ್ವಿನಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಆಗದ ಕಾರಣ ಜಲ ಪೂರೈಕೆಗೆ ಸಮಸ್ಯೆಯಾಗಿತ್ತು. ಈ ವರ್ಷ ಮುಂದಿನ ಒಂದೆರಡು ವಾರಗಳಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯಪ್ರವೃತ್ತವಾಗಬಹುದು.

    ನದಿಯಲ್ಲಿ ವಾಹನ ಸಂಚಾರ ಅಸಾಧ್ಯ: ಈ ಹಿಂದೆ ಬೇಸಿಗೆಯಲ್ಲಿ ಪಯಸ್ವಿನಿ ನದಿಯಲ್ಲಿ ವಾಹನಗಳು ಸರಾಗವಾಗಿ ದಾಟುತ್ತಿದ್ದವು. ಕುಂಟಾರು ದೇಗುಲ ಸಮೀಪದಿಂದ ನದಿ ದಾಟಿ ಚೆರ್ಲಕೈ, ಮಣಿಯೂರು, ಮಾಟೆಬಯಲು, ಅಡೂರು ಮತ್ತಿತರ ಕಡೆಗಳಿಗೆ ವಾಹನಗಳು ಸಾಗುತ್ತವೆ. ಆದರೆ ಕಿಂಡಿ ಅಣೆಕಟ್ಟು ನಿರ್ಮಾಣವಾದ ಕಾರಣ ಈ ವರ್ಷ ನದಿಯಲ್ಲಿ ವಾಹನ ದಾಟುವುದು ಸುಲಭವಲ್ಲ. ನದಿಯಲ್ಲಿ ರಸ್ತೆ ಇದ್ದ ಪ್ರದೇಶದಲ್ಲಿ ಪ್ರಸಕ್ತ ಅಣೆಕಟ್ಟಿನ ನೀರು ತುಂಬಿಕೊಂಡಿದೆ.

    ಕುಂಟಾರು ಕಿಂಡಿ ಅಣೆಕಟ್ಟು ಆಶ್ರಯಿಸಿ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಕ್ಷಾಮ ನೀಗಲು ಹಮ್ಮಿಕೊಂಡಿದ್ದ ಯೋಜನೆ ವಿವಿಧ ಕಾರಣಗಳಿಂದ ಇನ್ನೂ ಜಾರಿಯಾಗಿಲ್ಲ. ಈಗ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, ಮುಂದಿನ ಒಂದೆರಡು ವಾರಗಳಲ್ಲಿ ನೀರು ಸರಬರಾಜು ಆರಂಭಗೊಳ್ಳುವುದು.
    ಶ್ರೀಧರ ಎಂ
    ಅಧ್ಯಕ್ಷರು, ಬೆಳ್ಳೂರು ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts