ಹರಿದ್ವಾರ : ಉತ್ತರಾಖಾಂಡ ರಾಜ್ಯದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವ ಸಾಧುಸಂತರ ಬಣವಾದ ನಿರಂಜನಿ ಅಖಾರಾದ ಅಧ್ಯಕ್ಷ ರವೀಂದ್ರ ಪುರಿ ಅವರಿಗೆ ಕರೊನಾ ಸೋಂಕು ತಗುಲಿದೆ.
ಹರಿದ್ವಾರದಲ್ಲಿ ಏಪ್ರಿಲ್ 1 ರಿಂದ 30 ರವರೆಗೆ ಕುಂಭ ಮೇಳ ಏರ್ಪಟ್ಟಿದ್ದು, ಈವರೆಗೆ ಮೂರು ಶಾಹಿ ಸ್ನಾನಗಳು ನಡೆದಿವೆ. ಭಾರೀ ಸಂಖ್ಯೆಯಲ್ಲಿ ಸಂತರು ಮತ್ತು ಭಕ್ತಾದಿಗಳು ಭಾಗವಹಿಸುತ್ತಿರುವ ಈ ಮೇಳದ ಸ್ಥಳದಲ್ಲಿ ಹಲವು ಮುನ್ನೆಚ್ಚರಿಕೆಗಳನ್ನು ವಹಿಸಿದ್ದರೂ, ಕರೊನಾ ಪಾಸಿಟೀವ್ ಪ್ರಕರಣಗಳು ಹೆಚ್ಚುತ್ತಿವೆ.
ಇದನ್ನೂ ಓದಿ: ಎರಡು ಷರ್ಟ್ ಕದ್ದಿದ್ದಕ್ಕೆ 20 ವರ್ಷ ಜೈಲುವಾಸ! ಬಿಡುಗಡೆಯಾಗುವಷ್ಟರಲ್ಲೇ ಮೃತ್ಯುಕೂಪವಾಗಿದ್ದ ಮನೆ…
ಈ ಹಿನ್ನೆಲೆಯಲ್ಲಿ, ನಿನ್ನೆ ತಾನೇ ನಿರಂಜನಿ ಅಖಾರಾದ ಸಾಧುಗಳಿಗೆ ಏಪ್ರಿಲ್ 17 ರೊಳಗೆ ತಮ್ಮ ಶಿಬಿರಗಳನ್ನು ಖಾಲಿ ಮಾಡಲು ಅಧ್ಯಕ್ಷ ರವೀಂದ್ರ ಪುರಿ ಹೇಳಿದ್ದರು. ಜೊತೆಗೆ ಮುಂದಿನ ಶಾಹಿ ಸ್ನಾನ ನಿಗದಿಯಾಗಿರುವ 27 ರಂದು ಅಖಾರಾದ 12 ಜನ ಸಂತರು ಮಾತ್ರ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. ಹೆಚ್ಚಿನ ಜನರು ಭಾಗವಹಿಸುವುದನ್ನು ತಡೆಯಲು ಮೆರವಣಿಗೆ ಕೂಡ ಮಾಡುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದರು.
ಕುಂಭ ಮೇಳದಲ್ಲಿ 13 ಅಖಾರಾ ಪರಿಷದ್ನ ಸಂತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಅವುಗಳಲ್ಲಿ ನಿರ್ವಾಣಿ ಅಖಾರಾದ ಮುಖ್ಯಸ್ಥರಾದ 65 ವರ್ಷದ ಮಹಾಮಂಡಲೇಶ್ವರ್ ಕಪಿಲ್ ದೇವ್ ದಾಸ್ ಅವರಿಗೆ ಕರೊನಾ ಸೋಂಕು ತಗುಲಿತ್ತು. ದಾಸ್ ಅವರು ಹರಿದ್ವಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಉತ್ತರಾಖಾಂಡ ಸರ್ಕಾರ ಕುಂಭ ಮೇಳದ ಸ್ಥಳದಲ್ಲಿ ಕರೊನಾ ಪರೀಕ್ಷೆಗಳ ಸಂಖ್ಯೆಯನ್ನು ಮತ್ತೂ ಹೆಚ್ಚಿಸುವುದರೊಂದಿಗೆ, ಹೆಚ್ಚಿನ ನಿರ್ಬಂಧಗಳನ್ನೂ ಹೇರಿದೆ ಎನ್ನಲಾಗಿದೆ. (ಏಜೆನ್ಸೀಸ್)
‘ಮನೆಯಲ್ಲೇ ಇದ್ದರೂ ಕರೊನಾ ಸೋಂಕು ಹೇಗೆ ತಗುಲಿತು ?’ – ನಟ ರಾಹುಲ್ ರಾಯ್ ಪ್ರಶ್ನೆ!
ಹಡ್ಸನ್ ನದಿಯಲ್ಲಿ ಭಾರತ ಮೂಲದ ಗಣಿತಜ್ಞನ ಶವ !