ಕುಮಟಾ: ದಯೆ ಮತ್ತು ಕರುಣೆ ಎಂಬ ಧರ್ಮಭಾವದಿಂದ ವನ್ಯಜೀವಿಗಳ ಜತೆಜತೆಯಾಗಿ ಎಲ್ಲರೂ ಬದುಕಬೇಕೆಂಬುದೇ ವನ್ಯಜೀವಿ ಸಪ್ತಾಹದ ಜನಜಾಗೃತಿಯ ಮೂಲ ಉದ್ದೇಶವಾಗಿದೆ ಎಂದು ಡಿಎಫ್ಒ ರವಿಶಂಕರ್ ಸಿ. ಹೇಳಿದರು.
69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ಹಾಗೂ ಡಾ. ಬಾಳಿಗಾ ಕಾಲೇಜ್ನ
ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಗೃತಿ ಜಾಥಾ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದೆ ಬ್ರಿಟಿಷರು ಹಾಗೂ ರಾಜರ ಕಾಲದಲ್ಲಿ ದೇಶದಲ್ಲಿ ನಾಮಾವಶೇಷ ಹಂತ ತಲುಪಿದ್ದ ಹುಲಿ- ಸಿಂಹಗಳಂತದಹ ಕಾಡುಪ್ರಾಣಿಗಳನ್ನು ಸ್ವಾತಂತ್ರೃ ಬಂದ ಬಳಿಕ ಪುನರುತ್ಥಾನಗೊಳಿಸುವುದು ಅತ್ಯಂತ ಆವಶ್ಯಕ ಎಂಬ ಕಾರಣಕ್ಕೆ 1952ರಿಂದ ವನ್ಯಜೀವಿ ಸಪ್ತಾಹದಡಿ ಜನಜಾಗೃತಿ ಕಾರ್ಯ ಆರಂಭಿಸಲಾಗಿದೆ ಎಂದರು.
ಹಿರಿಯ ವಿಜ್ಞಾನಿ ಡಾ. ಎಂ.ಡಿ. ಸುಭಾಷ ಚಂದ್ರನ್, ಸರ್ಕಾರಗಳು ಈಗ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಹೆಚ್ಚು ಕಾಳಜಿ ಹೊಂದಿವೆ. ಅಳಿವಿನ ಹಂತದಲ್ಲಿದ್ದ ಕಾಡುಪ್ರಾಣಿಗಳ ಸಂಖ್ಯೆ ಜಾಸ್ತಿಯಾಗಿದೆ. ಇದೇ ರೀತಿ ಕಾಡಿನ ಪ್ರಾಕೃತಿಕ ಸಂಪತ್ತಿನ ಜತೆಗೆ ಎಲ್ಲ ವನ್ಯಜೀವಿಗಳ ರಕ್ಷಣೆಯೂ ಮಹತ್ವದ್ದಾಗಿದೆ ಎಂದರು. ಪ್ರಾಚಾರ್ಯ ಸೋಮಶೇಖರ ಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಎಸಿಎಫ್ ಜಿ. ಲೋಹಿತ್, ಕುಮಟಾ ಆರ್ಎಫ್ಒ ಎಸ್.ಟಿ.ಪಟಗಾರ, ಅರಣ್ಯ ಸಿಬ್ಬಂದಿ, ಎನ್ಸಿಸಿ ವಿದ್ಯಾರ್ಥಿಗಳು ಇದ್ದರು.
ಇದಕ್ಕೂ ಮುನ್ನ ಪಟ್ಟಣದ ಮಾಸ್ತಿಕಟ್ಟೆ ವೃತ್ತದಿಂದ ಡಾ. ಎ.ವಿ. ಬಾಳಿಗಾ ಕಾಲೇಜಿನವರೆಗೆ, ವನ್ಯಜೀವಿಗಾಗಿ ನಡಿಗೆ ಎಂಬ ಘೋಷವಾಕ್ಯದೊಂದಿಗೆ ಕಾಲ್ನಡಿಗೆಯಲ್ಲಿ ಜಾಗೃತಿಜಾಥಾ ನಡೆಸಲಾಯಿತು.