ಕುಕನೂರು: ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ರೈತರ ಹಕ್ಕು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶಿರಸ್ತೇದಾರ್ ಸುರೇಶ ಬಾಲೇಹೊಸುರುಗೆ ಶನಿವಾರ ಮನವಿ ಸಲ್ಲಿಸಿದರು.
ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬರಗಾಲ ಆವರಿಸಿ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಯರಿ ಭಾಗದಲ್ಲಿ ಕೆಲವು ರೈತರು ಕಡಲೆ ಬೆಳೆಯ ಕಟಾವು ಕೈಗೊಂಡಿದ್ದು, ಒಂದು ವಾರದೊಳಗೆ ಸರ್ಕಾರ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ಘೋಷಣೆ ಮಾಡಬೇಕು.
ಕಡಲೆ ಕಟಾವು ವೆಚ್ಚ ಹೆಚ್ಚುತ್ತಿದ್ದು, ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು. ಪ್ರತಿ ರೈತನಿಂದ 20 ರಿಂದ 25 ಕ್ವಿಂಟಾಲ್ ಕಡಲೆ ಖರೀದಿಸಬೇಕು. ಪ್ರತಿ ಕ್ವಿಂಟಾಲ್ಗೆ 8,272 ರಿಂದ 9,275 ರೂ. ನಿಗದಿ ಮಾಡಬೇಕು. ಕುಕನೂರು ಎಪಿಎಂಸಿಯಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಸೇನೆಯ ಉಪಾಧ್ಯಕ್ಷ ಅಂದಪ್ಪ ಕೋಳೂರ, ರೈತ ಸಂಘದ ಪದಾಧಿಕಾರಿಗಳಾದ ಶರಣಪ್ಪ ಮೇಟಿ, ಹನುಮಂತಪ್ಪ ಕುಕನೂರು, ಶಿವಾನಂದಯ್ಯ ಇತರರಿದ್ದರು.