ಕುಕನೂರು: ತಾಲೂಕಿನ ಲಕಮಾಪುರದಲ್ಲಿ ಬುಧವಾರ ಸಂಜೆ ಗಾಳಿ, ಮಳೆಗೆ ಸುಮಾರು 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಹಾನಿಯಾಗಿದೆ.
ಗ್ರಾಮದ ಉಮೇಶ ನಗರದ, ವೀರಯ್ಯ ಕಣವಿ, ಹಮ್ಮಿಗೇಶ್ವರಯ್ಯ, ನಿಂಗಪ್ಪ ಬನ್ನಿಕೊಪ್ಪ ಎಂಬ ರೈತರ ಬಾಳೆ ನೆಲಕ್ಕೆ ಬಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬಾಳೆ ಬೆಳೆಯಲಾಗಿದ್ದು, ಫಸಲು ಕೈಗೆ ಬರುವ ಹೊತ್ತಲ್ಲಿ ನೆಲದ ಪಾಲಾಗಿದೆ. ಕಂದಾಯ ನಿರೀಕ್ಷಕ ಶರಣಪ್ಪ ಮುರ್ಲಾಪುರ ಸ್ಥಳಕ್ಕೆ ಭೇಟಿ ನೀಡಿ ಹಾನಿ ಸಮೀಕ್ಷೆ ಮಾಡಿದ್ದಾರೆ. ಕರೊನಾ ಸಂಕಷ್ಟದ ದಿನದಲ್ಲಿ ಲಾಭದ ನಿರೀಕ್ಷೆ ಮಾಡದೇ ಇದ್ದರೂ ಖರ್ಚಿಗಾದರೂ ಆದೀತು ಎಂದು ನಿರೀಕ್ಷೆಯಲ್ಲಿದ್ದ ರೈತರಿಗೆ ಗಾಳಿ, ಮಳೆ ಮತ್ತಷ್ಟು ನಷ್ಟವುಂಟು ಮಾಡಿದೆ.