ಹಾವೇರಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪರೀಕ್ಷೆ ವೇಳಾಪಟ್ಟಿ ಸಮಯ ಬದಲಾವಣೆ ಎಡವಟ್ಟಿನಿಂದ ತಾಲೂಕಿನ ಗಾಂಧಿಪುರ ಸರ್ಕಾರಿ ಪದವಿ ಕಾಲೇಜು ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಬುಧವಾರ ನಡೆದ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ಗಾಂಧಿಪುರ ಕಾಲೇಜಿನಲ್ಲಿ ಅರ್ಥಶಾಸ್ತ್ರ ಅಭ್ಯಸಿಸುತ್ತಿದ್ದ 15 ಹಾಗೂ ಇತಿಹಾಸ ವಿಷಯದ 8 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ತಮಗೆ ನೀಡಿದ್ದ ಪರೀಕ್ಷಾ ಪ್ರವೇಶ ಪತ್ರದಲ್ಲಿ ಮಾ.15ರಂದು ಮಧ್ಯಾಹ್ನ 2ರಿಂದ 5ರವರೆಗೆ ಪರೀಕ್ಷೆ ಇರುವುದಾಗಿ ತಿಳಿಸಲಾಗಿತ್ತು. ಇದೇ ಸಮಯಕ್ಕೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ, ಈ ವೇಳೆಗಾಗಲೇ ಪರೀಕ್ಷೆ ಮುಗಿಯುವ ಹಂತಕ್ಕೆ ಬಂದಿತ್ತು.
ಕವಿವಿ ಪರೀಕ್ಷಾ ವೇಳಾಪಟ್ಟಿ ಬದಲಾವಣೆ ಮಾಡಿರುವುದನ್ನು ಸೂಚನಾ ಫಲಕಕ್ಕೆ ಅಂಟಿಸಿರುವುದಾಗಿ ಪ್ರಾಂಶುಪಾಲರು ಹೇಳುತ್ತಾರೆ. ಆದರೆ, ಪ್ರವೇಶ ಪತ್ರ ತೆಗೆದುಕೊಂಡು ಹೋದ ಬಳಿಕ ಕಾಲೇಜಿಗೆ ಬಂದಿಲ್ಲ. ಹಾಗಾಗಿ, ಸಂದೇಶದ ಮೂಲಕ ಅಥವಾ ವಾಟ್ಸ್ ಆ್ಯಪ್ ಮೂಲಕ ತಿಳಿಸಬೇಕಿತ್ತು. ಸರಿಯಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡದ ಕಾರಣ ಪರೀಕ್ಷೆಯಿಂದ ವಂಚಿತರಾಗಿದ್ದೇವೆ. ಹಾಗಾಗಿ, ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಎಸ್ಎಫ್ಐ ನೇತೃತ್ವದಲ್ಲಿ ಗುರುವಾರ ಪ್ರಾಂಶುಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ ಗಣೇಶ ರಾಠೋಡ, ವಿವೇಕ ಫನಸೆ, ಕಾವ್ಯಾ ಸೂರದ, ಬಸವರಾಜ ಹೊಂಬಳ, ಕಲ್ಲಪ್ಪ ಹೊಟ್ಟೆಪ್ಪನವರ, ಮಹಮ್ಮದ ಎಣ್ಣಿ, ದರ್ಶನ ಅಂಬಿಗೇರ, ಚಂದ್ರಶೇಖರಗೌಡ ಕೆ.ಪಿ., ಲೋಕೇಶ ಹುಚ್ಚಮ್ಮನವರ, ಮಹೇಶ ಹುಲ್ಲಾಳ, ಉಪಸ್ಥಿತರಿದ್ದರು.
ಕೋಟ್:
ಕವಿವಿ ವೇಳಾಪಟ್ಟಿ ಬದಲಾವಣೆ ಮಾಡಿರುವುದನ್ನು ಕಾಲೇಜಿನ ನೋಟಿಸ್ ಬೋರ್ಡ್ನಲ್ಲಿ ಅಂಟಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳು ಇದನ್ನು ಗಮನಿಸಿಲ್ಲ. ವಿವಿ ನಿಯಮಾವಳಿಯಂತೆ ನಾವು ನಡೆದುಕೊಂಡಿದ್ದೇವೆ.
ಡಾ.ಡಿ.ಟಿ.ಪಾಟೀಲ, ಪ್ರಾಂಶುಪಾಲ, ಸರ್ಕಾರಿ ಪದವಿ ಮಹಾವಿದ್ಯಾಲಯ, ಗಾಂಧಿಪುರ