ಲಾಕ್ಡೌನ್ ನಂತರ ಕನ್ನಡ ಚಿತ್ರರಂಗದಲ್ಲಿ ನಿಧಾನವಾಗಿ ಸಿನಿಮಾ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ. ಬುಧವಾರವಷ್ಟೇ ಲವ್ ಮಾಕ್ಟೇಲ್ ಚಿತ್ರದ ಸೀಕ್ವೆಲ್ನ ಸ್ಕ್ರಿಪ್ಟ್ ಪೂಜೆ ನಡೆದಿತ್ತು. ಈಗ ಕೃಷ್ಣ ಅಭಿನಯದ ಶ್ರೀಕೃಷ್ಣ@ಜಿಮೇಲ್ ಡಾಟ್ಕಾಮ್ ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ಅರ್ಜುನ್ ಜನ್ಯಾ ಸ್ಟುಡಿಯೋದಲ್ಲಿ ಅಧಿಕೃತವಾಗಿ ನಡೆದಿದೆ.
ಇದನ್ನೂ ಓದಿ: ಸುಶಾಂತ್ಗೆ ನಿರ್ಮಾಪಕ ಅಭಿಷೇಕ್ ದಂಪತಿ ಹೇಗೆ ವಿಶೇಷ ಗೌರವ ಸಲ್ಲಿಸಲಿದ್ದಾರೆ ಗೊತ್ತಾ?
ಶ್ರೀಕೃಷ್ಣ@ಜಿಮೇಲ್ ಡಾಟ್ಕಾಮ್ ಚಿತ್ರದ ಮುಹೂರ್ತದ ಆಹ್ವಾನ ಪತ್ರಿಕೆಯನ್ನು ಕೆಲವು ದಿನಗಳ ಹಿಂದೆಯೇ ನಾಗಶೇಖರ್ ಕಳುಹಿಸಿದ್ದಾರೆ. ಮುಹೂರ್ತಕ್ಕೆ ಬರಬೇಡಿ, ಇದ್ದಲ್ಲೇ ಚಿತ್ರತಂಡವನ್ನು ಹಾರೈಸಿಬಿಡಿ ಎಂದು ಆಹ್ವಾನ ಪತ್ರಿಕೆಯಲ್ಲೇ ನಮೂದಿಸಿದ್ದರು. ಅದರಂತೆ, ಕೆಲವೇ ಜನರ ಸಮ್ಮುಖದಲ್ಲಿ ಇಂದು ಬೆಳಿಗ್ಗೆ ಶ್ರೀಕೃಷ್ಣ@ಜಿಮೇಲ್ ಡಾಟ್ಕಾಮ್ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ.
ವಿಶೇಷ ಎಂದರೆ, ಡಾ. ರಾಜಕುಮಾರ್ ಅವರ ಮೇಲೆ ಮೊದಲ ದೃಶ್ಯ ಚಿತ್ರೀಕರಣ ಮಾಡಲಾಯಿತು. ಹಿರಿಯ ಛಾಯಾಗ್ರಾಹಕ ಸತ್ಯ ಹೆಗಡೆ ಅವರು ಮೊದಲ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು. ಈ ಸಂದರ್ಭದಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್, ನಾಗಶೇಖರ್, ಕೃಷ್ಣ, ಮಿಲನಾ ನಾಗರಾಜ್ ಮುಂತಾದವರು ಹಾಜರಿದ್ದರು.
ಈ ಸಂದರ್ಭದಲ್ಲಿ ಚಿತ್ರದ ಹಾಡುಗಳ ಕಂಪೋಸಿಂಗ್ ಕೆಲಸವೂ ಶುರುವಾಗಿದೆ. ಚಿತ್ರದಲ್ಲಿ ನಾಲ್ಕು ಸುಮಧುರ ಹಾಡುಗಳಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ ಎಂದು ನಾಗಶೇಖರ್ ಹೇಳಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ, ಕಥೆ-ಚಿತ್ರಕಥೆ-ಸಂಭಾಷಣೆಯನ್ನೂ ಅವರೇ ರಚಿಸಿದ್ದಾರೆ.
ಇದನ್ನೂ ಓದಿ: ಜಿಯಾ ಸಾವಿನ ತನಿಖೆಗೆ ಸಲ್ಮಾನ್ ಅಡ್ಡಗಾಲು!
ಅಂದಹಾಗೆ, ಕೃಷ್ಣಗೆ ನಾಯಕಿಯ ಹುಡುಕಾಟ ನಡೆದಿದ್ದು, ರಾಧಿಕಾ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಲಾಗಿದೆಯಂತೆ. ಈಗಾಗಲೇ ರಾಧಿಕಾ ಅವರು ಚಿತ್ರದ ಕಥೆ ಕೇಳಿದ್ದು, ಇನ್ನಷ್ಟೇ ಗ್ರೀನ್ ಸಿಗ್ನಲ್ ನೀಡಬೇಕಿದೆ. ಸದ್ಯಕ್ಕೆ ಮುಹೂರ್ತ ಮುಗಿಸಿರುವ ಚಿತ್ರತಂಡದವರು, ಚಿತ್ರೀಕರಣ ಮಾಡುವುದಕ್ಕೆ ಅನುಮತಿಗಾಗಿ ಕಾಯುತ್ತಿದ್ದಾರೆ. ಅನುಮತಿ ಸಿಕ್ಕ ತಕ್ಷಣ ಶ್ರೀಕೃಷ್ಣ@ಜಿಮೇಲ್ ಡಾಟ್ಕಾಮ್ ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಪ್ರಾರಂಭವಾಗಲಿದೆ.