ಕಾರವಾರ: ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳ ನೇಮಕಾತಿಗಾಗಿ ಕನ್ನಡ ಭಾಷಾ ಹಾಗೂ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಗಳು ಕರ್ನಾಟಕ ಲೋಕಸೇವಾ ಆಯೋಗದಿಂದ ಜನವರಿ 20 ಮತ್ತು 21 ರಂದು ಜಿಲ್ಲೆಯ 9 ಕೇಂದ್ರಗಳಲ್ಲಿ ನಡೆಯಲಿದೆ.
ಪರೀಕ್ಷೆಗೆ ಭಾಗವಹಿಸುವ ಅಭ್ಯರ್ಥಿಗಳಿಗೆ ಕೆಪಿಎಸ್ಸಿ ಸಾಕಷ್ಟು ನಿಬಂಧನೆಗಳನ್ನು ವಿಧಿಸಿದೆ. ಪುರುಷ ಅಭ್ಯರ್ಥಿಗಳು ಅಭ್ಯರ್ಥಿಗಳು ಶೂ ಹಾಗೂ ಶಾಕ್ಸ್ ಧರಿಸುವಂತಿಲ್ಲ. ಸಾಧಾರಣ ಚಪ್ಪಲಿ ಧರಿಸಬೇಕು. ಪೂರ್ಣ ತೋಳಿನ ಅಂಗಿ ಧರಿಸುವಂತಿಲ್ಲ. ಬಾಯಿ ಮುಚ್ಚುವ ಫೇಸ್ ಮಾಸ್ಕ್ ಧರಿಸುವಂತಿಲ್ಲ. ಮಹಿಳಾ ಅಭ್ಯರ್ಥಿಗಳು ಮಂಗಳ ಸೂತ್ರ, ಕಾಲುಂಗುರಗಳನ್ನು ಹೊರತುಪಡಿಸಿ ಬೇರೆ ಆಭರಣ ತೊಡುವಂತಿಲ್ಲ. ಜಾಕೆಟ್, ಸ್ವೆಟರ್ ಧರಿಸುವಂತಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಇಲೆಕ್ಟ್ರಾನಿಕ್ಸ್ ವಸ್ತುಗಳು ಅಂದರೆ, ಮೊಬೈಲ್ ಫೋನ್ಗಳು, ಸ್ಮಾರ್ಟ್ ವಾಚ್, ವೈರ್ಲೆಸ್, ಬ್ಲೂ-ಟೂತ್, ಇಯರ್, ಹೆಡ್ ಫೋನ್ಗಳನ್ನು ತರುವುದನ್ನು ನಿಷೇಧಿಸಲಾಗಿದೆ.ಮೆಟಲ್ ಹಾಗೂ ನಾನ್ ಟ್ರಾನ್ಸ್ಫರೆಂಟ್ ವಾಟರ್ ಬಾಟಲ್ ತರುವಂತಿಲ್ಲ. ಕಿವಿ ಬಾಯಿ ಮುಚ್ಚಿಕೊಳ್ಳುವಂತೆ, ಯಾವುದೇ ರೀತಿಯ ಫಿಲ್ಟರ್ ಇರುವ ಮಾಸ್ಕ್ ಧರಿಸುವಂತಿಲ್ಲ ಎಂದು ಎಚ್ಚರಿಸಲಾಗಿದೆ.
ಧಾರ್ಮಿಕ ಆಚರಣೆಗೆ ಸಂಬಂಧಿಸಿದ ವಸ್ತುಗಳನ್ನುಧರಿಸಿ ಬರುವವರು ಮತ್ತು ಹಿಯರಿಂಗ್ ಏಡ್ ಧರಿಸಿ ಬರುವ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 2 ಗಂಟೆ ಮುಂಚಿತವಾಗಿ ಬಂದು ತಪಾಸಣೆಗೆ ಒಳಪಡಬೇಕು ಎಂದು ಸೂಚಿಸಲಾಗಿದೆ.
ಕಳೆದ ಬಾರಿ ಕೆಪಿಎಸ್ಸಿ ಪರೀಕ್ಷೆ ಸಂದರ್ಭದಲ್ಲಿ ತಾಳಿಯನ್ನು ತೆಗೆಯುವಂತೆ ಸೂಚಿಸಿದ ಕೆಪಿಎಸ್ಸಿ ಸೂಚನೆಯ ಬಗ್ಗೆ ಭಾರೀ ಆಕ್ಷೇಪ ಕೇಳಿ ಬಂದಿತ್ತು. ಬಿಜೆಪಿ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿತ್ತು. ಇದರಿಂದ ಈ ಬಾರಿ ನಿಯಮ ಬದಲಿಸಲಾಗಿದ್ದು, ತಾಳಿ, ಕಾಲುಂಗುರ ಹೊರತುಪಡಿಸಿ ಇತರ ಆಭರಣಗಳನ್ನು ಧರಿಸುವಂತಿಲ್ಲ ಎಂದು ಸೂಚಿಸಲಾಗಿದೆ. ಕಿವಿಯೋಲೆಯ ಬಗ್ಗೆ ಪ್ರಸ್ತಾಪವಿಲ್ಲ.
ನಿಷೇಧಾಜ್ಞೆ ಜಾರಿ:
ಜಿಲ್ಲೆಯ ವಿವಿಧ ತಾಲೂಕು ಹಾಗೂ ಬೇರೆ ಜಿಲ್ಲೆಗಳಿಂದ 2475 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದಾರೆ. ಇದರಿಂದ ಪರೀಕ್ಷಾ ಉಸ್ತುವಾರಿ ಸಮಿತಿಯಿಂದ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಸದ್ಯ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಸುತ್ತಲಿನ ಪ್ರದೇಶಗಳಲ್ಲಿ ಜರಾಕ್ಸ್ ಅಂಗಡಿ, ಸೈಬರ್ ಕೆಫೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದ್ದು, ಪರೀಕ್ಷೆಗೆ ವಿದ್ಯಾರ್ಥಿಗಳು ತಲುಪಲು ಅನುಕೂಲವಾಗುವಂತೆ ತಾಲೂಕು ಕೇಂದ್ರಗಳಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳು:
ಕಾರವಾರದ ಸರ್ಕಾರಿ ಪದವಿಪೂರ್ವ ಕಾಲೇಜ್,ಸರ್ಕಾರಿ ಹೈಸ್ಕೂಲ್, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್,ಹಿಂದು ಹೈಸ್ಕೂಲ್, ರಹಿಂ ಖಾನ್ ಯುನಿಟಿ ಹೈಸ್ಕೂಲ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಸೇಂಟ್ ಜೊಸೆಫ್ ಹೈಸ್ಕೂಲ್, ಚಿತ್ತಾಕುಲಾದ ಶಿವಾಜಿ ಪದವಿಪೂರ್ವ ಕಾಲೇಜ್, ಬಿಜಿವಿಎಸ್ ಆರ್ಟ್ ಮತ್ತು ಕಾಮರ್ಸ್ ಕಾಲೇಜ್ಗಳಲ್ಲಿ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ: ಮತ್ತೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಆತಂಕ