ಬೆಂಗಳೂರು: ಆರ್ಆರ್ ನಗರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣೆಯ ಹತ್ತಿರ ಬರುತ್ತಿದ್ದಂತೆ ಪಕ್ಷಗಳ ನಾನಾ ಕಸರತ್ತು ಜೋರಾಗಿ ನಡೆದಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಆಡಳಿತರೂಢ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ಭಾರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ.
ಕಾಂಗ್ರೆಸ್ನಿಂದ ಬಿಜೆಪಿಗೆ ಹಾರಿ ಆರ್ಆರ್ ನಗರ ಕ್ಷೇತ್ರದಿಂದ ಕಾಂಗ್ರೆಸ್ ವಿರುದ್ಧವೇ ಕಣಕ್ಕಿಳಿದಿರುವ ಹಾಗೂ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಮುನಿರತ್ನರನ್ನು ಸೋಲಿಸಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಕಷ್ಟು ರಣತಂತ್ರಗಳನ್ನು ಎಣೆಯುತ್ತಿದ್ದಾರೆ.
ಈ ಹಿಂದೆ ನಟ ನೆನಪಿರಲಿ ಪ್ರೇಮ್ ಮನೆಗೆ ಭೇಟಿ ನೀಡಿ ಕುತೂಹಲ ಸೃಷ್ಟಿಸಿದ್ದ ಡಿಕೆಶಿ, ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ನಟ ವಿನೋದ್ ಪ್ರಭಾಕರ್ ಮನೆಗೆ ಭೇಟಿ ನೀಡಿರುವುದು ಮತ್ತೊಮ್ಮೆ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಜೈಲಿನಿಂದ ಹೊರಬಂದ ಡಿ.ಜೆಹಳ್ಳಿ ಗಲಭೆ ಆರೋಪಿ ನವೀನ್ ಹೇಳಿದ್ದೇನು?
ರಾಜರಾಜೇಶ್ವರಿ ನಗರ ಹಾಗು ಶಿರಾ ಉಪಚುನಾವಣೆ ಪ್ರಚಾರಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ಸ್ಥಾನಮಾನ ಕೊಡುವ ಬಗ್ಗೆಯೂ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ಕೇವಲ ಮಾತುಕತೆ ಮಾತ್ರವಲ್ಲದೇ ಮರಿ ಟೈಗರ್ ಮನೆಯಲ್ಲಿ ಡಿಕೆಶಿಯ ಊಟೋಪಚಾರವು ನಡೆದಿದೆ.
ಈ ಹಿಂದೆ ನೆನಪಿರಲಿ ಪ್ರೇಮ್ ಮಾತ್ರವಲ್ಲದೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡರನ್ನು ಡಿಕೆಶಿ ಭೇಟಿ ಮಾಡಿದ್ದರು. ನಾಗರಬಾವಿ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದರು. ಇದೇ ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದ್ದರು. (ದಿಗ್ವಿಜಯ ನ್ಯೂಸ್)