ಕೊಟ್ಟೂರು: ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರುಪಯುಕ್ತವಾಗಿದ್ದ ಬ್ರಿಟಿಷರ ಕಾಲದ ತೇಗ, ಹೊನ್ನಿ, ಬೀಟೆ ಮರದ ಹಲಗೆ ಸೇರಿ ಬೇರೆ ಮರಗಳ ಸಾಮಗ್ರಿ ಕೊಟ್ಟೂರು ತಹಸಿಲ್ ಕಚೇರಿಯಲ್ಲಿ ಮರುಬಳಕೆ ಮಾಡುವ ಮೂಲಕ ತಹಸೀಲ್ದಾರ್ ಅನಿಲ್ ಕುಮಾರ್ ಮಾದರಿಯಾಗಿದ್ದಾರೆ.
ಬ್ರಿಟಿಷರ ಕಾಲದ ಮರದ ರ್ಯಾಕ್ಗಳು, ಉದ್ದದ ಹಲಗೆಗಳು ನಿರುಪಯುಕ್ತವಾಗಿದ್ದವು. ಹೀಗಾಗಿ ಸಾಮಗ್ರಿ ಹರಾಜಿಗೆ ಜಿಲ್ಲಾಡಳಿತ ಮುಂದಾಗಿತ್ತು. ಆದರೆ, ತಹಸೀಲ್ದಾರ್ ಅನಿಲ್ ಕುಮಾರ್, ವಸ್ತುಗಳನ್ನು ಪರಿಶೀಲಿಸಿದಾಗ ಚನ್ನಾಗಿರುವುದು ಕಂಡು ಬಂದಿವೆ. ಬಳಿಕ ಮರುಬಳಕೆ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಿ ಒಪ್ಪಿಗೆ ಪಡೆದಿದ್ದಾರೆ. ಟ್ರ್ಯಾಕ್ಟರ್ ಮೂಲಕ ಬಳ್ಳಾರಿಯಿಂದ ಕೊಟ್ಟೂರಿಗೆ ತಂದಿದ್ದು, ಡಯಾಸ್, ಮೂರು ಉದ್ದನೆಯ ಟೇಬಲ್, ಮರದ ಪ್ಲಾಟ್ಫಾರಂ, ಐದು ಮೇಜುಗಳನ್ನು ಮಾಡಿಸುವ ಮೂಲಕ ಸರ್ಕಾರದ ಹಣ ಉಳಿಸುವ ಜತೆಗೆ ತಾಲೂಕು ಕಚೇರಿಯ ಪೀಠೋಪಕರಣ ಕೊರತೆಯನ್ನೂ ನೀಗಿಸಿದ್ದಾರೆ.