ಕೊಟ್ಟೂರು: ಶೈಕ್ಷಣಿಕ ಕೇಂದ್ರ ಕೊಟ್ಟೂರು ಈ ಬಾರಿ ಪಿಯುಸಿ,ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಂದ ವಂಚಿತವಾಗಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಬೇಸರಮೂಡಿಸಿದೆ.
ಶೈಕ್ಷಣಿಕ ಭೂಪಟದಲ್ಲಿ ಕೊಟ್ಟೂರು ಹೆಗ್ಗುರುತು
ಪಿಯುಸಿಯಲ್ಲಿ ಸತತವಾಗಿ ಫಸ್ಟ್ ರ್ಯಾಂಕ್ ಸೇರಿದಂತೆ ಟಾಪ್ ಟೆನ್ ರ್ಯಾಂಕ್ ಗಳನ್ನು ಕೊಟ್ಟೂರು ವಿದ್ಯಾರ್ಥಿಗಳು ಮುಡಿಗೇರಿಸಿಕೊಂಡಿದ್ದರಿಂದ ಕರ್ನಾಟಕದ ಶೈಕ್ಷಣಿಕ ಭೂಪಟದಲ್ಲಿ ಕೊಟ್ಟೂರು ಹೆಗ್ಗುರುತು ಮೂಡಿಸಿದ್ದರು.
ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ; ಗ್ರಾಮೀಣ, ಸರ್ಕಾರಿ ಶಾಲಾ ಮಕ್ಕಳದೇ ಮೇಲುಗೈ!
ಇದರಿಂದ ರಾಜ್ಯದ ಮೂಲೆ, ಮೂಲೆಗಳಿಂದ ಕೊಟ್ಟೂರಿನಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಪೋಷಕರ ನಿರೀಕ್ಷೆಯಂತೆ ವಿದ್ಯಾರ್ಥಿಗಳು ಅಧಿಕ ಅಂಕ, ರ್ಯಾಂಕ್ ಪಡೆಯುತ್ತಿದ್ದರು.
ಸತತ 7 ವರ್ಷ ಪಿಯುಸಿ ಕಲಾ ವಿಭಾಗದ ಇಲ್ಲಿನ ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್ ಗಳಿಸಿ ಕರ್ನಾಟಕದಲ್ಲಿ ಯಾವ ಪ.ಪೂ. ಕಾಲೇಜು ನಿರ್ಮಿಸಿದ ದಾಖಲೆ ಸೃಷ್ಟಿಸಿದ್ದು, ನಿಜಕ್ಕೂ ಹೆಮ್ಮೆಯ ಸಂಗತಿ.
ದ್ವಿತೀಯ ರ್ಯಾಂಕ್ ಹಂಚಿಕೊಂಡಿದ್ದೇ ಹೆಗ್ಗಳಿಕೆ
ಕಳೆದ ವರ್ಷದ ಎಸ್ಸೆಸ್ಸೆಲ್ಸಿಯಲ್ಲಿಯೂ ಪ್ರಥಮ ರ್ಯಾಂಕ್ನ್ನು ಇಲ್ಲಿನ ವಿದ್ಯಾರ್ಥಿಗಳು ಪಡೆಯುವ ಮೂಲಕ ಎಸ್ಸೆಸ್ಸೆಲ್ಸಿಯಲ್ಲಿಯೂ ನಾವು ರ್ಯಾಂಕ್ ಪಡೆಯಬಲ್ಲೆವೂ ಎಂದು ನಿರೂಪಿಸಿದ್ದರು. ಕಲಾ ವಿಭಾಗದಲ್ಲಿ ಈ ಬಾರಿ ದ್ವಿತೀಯ ರ್ಯಾಂಕ್ ಹಂಚಿಕೊಂಡಿದ್ದೇ ಹೆಗ್ಗಳಿಕೆಯಾಗಿದೆ.
ವಿಜಯನಗರ ಜಿಲ್ಲೆಯಲ್ಲಿ ಕೊಟ್ಟೂರು ತಾಲೂಕು ಕೇಂದ್ರವಾದರೂ ಜಿಲ್ಲಾ ಕೇಂದ್ರ ಹೊಸಪೇಟೆಗೆ ಸ್ಪರ್ಧೆಯಾಗುವಷ್ಟು ಶಾಲಾ ಕಾಲೇಜ್ಗಳು ಇಲ್ಲಿವೆ. ಆದರೆ ಕೊಟ್ಟೂರು ಸ್ವಾತಂತ್ರ ಪೂರ್ವದಲ್ಲಿ ಇಲ್ಲಿನ ಅಯ್ಯನವರ ಶಾಲೆಗಳು ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದ್ದವು.
ಬಳ್ಳಾರಿ ಪಟ್ಟಣ ಹೊರತು ಪಡಿಸಿದರೆ, ಸಣ್ಣ ಪಟ್ಟಣವಾಗಿದ್ದ ಕೊಟ್ಟೂರು ಅತ್ಯುತ್ತಮ ಶೈಕ್ಷಣಿಕ ಕೇಂದ್ರವೆಂಬ ಖ್ಯಾತಿ ಪಡೆದಿತ್ತು. ಹಲವು ಕ್ಷೇತ್ರಗಳಿಗೆ ದಿಗ್ಗಜರನ್ನು ಕೊಡುಗೆ ನೀಡಿದ ಕೀರ್ತಿಯೂ ಕೊಟ್ಟೂರಿಗೆ ಸಲ್ಲುತ್ತದೆ.
ಪ್ರತಿ ವರ್ಷ ನಮ್ಮೂರು ಹುಡುಗರು ಪಿಯುಸಿ,ಎಸ್ಸೆಸ್ಸೆಲ್ಸಿಯಲ್ಲಿ ರ್ಯಾಂಕ್ ಬಂದಾಗ ನನಗೆ ಆತೀವ ಸಂತೋಷ ಮತ್ತು ಹೆಮ್ಮೆಯಾಗುತ್ತಿತ್ತು. ನಾನು ವಿವಿಧ ಕಡೆ ಉಪನ್ಯಾಸಕ್ಕೆ ಹೋದಾಗ, ಪ್ರತಿ ವರ್ಷ ರ್ಯಾಂಕ್ ಬರುತ್ತದೆಯಲ್ಲ ಕೊಟ್ಟೂರು. ಆ ಊರು ನಿಮ್ಮದಾ ಎಂದಾಗ, ನನಗೆ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. ಈ ವರ್ಷ ರ್ಯಾಂಕ್ ಬಾರದಿದ್ದರೇನಂತೆ ಮುಂದಿನ ವರ್ಷ ಬರುತ್ತದೆ ಎಂಬ ವಿಶ್ವಾಸ ನನಗಿದೆ.
| ಕುಂ.ವೀರಭದ್ರಪ್ಪ, ಸಾಹಿತಿ, ಕೊಟ್ಟೂರು.