ಕೊಟ್ಟೂರು: ರಾಜ್ಯ ಸರ್ಕಾರ ಶಾಸಕರ ಅನುದಾನ ಸಂಪೂರ್ಣವಾಗಿ ಬಿಡುಗಡೆ ಮಾಡಿಲ್ಲ. 2019 ಮತ್ತು 2020ರ ಸಾಲಿನಲ್ಲಿ ಒಟ್ಟು 2.30 ಕೋಟಿ ರೂ. ಬಾಕಿ ಇದೆ. ಆದರೆ, ಅನುದಾನ ಬಳಕೆಯಾಗದೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕೊಳೆಯುತ್ತಿರುವುದಾಗಿ ವಿಧಾನಸಭೆ ಅಧ್ಯಕ್ಷರು ಹೇಳಿರುವುದು ಆಶ್ಚರ್ಯ ಮೂಡಿಸಿದೆ ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.
ತಾಲೂಕಿನ ಹ್ಯಾಳ್ಯಾ ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ಮತ್ತು ನೂತನ ಗ್ರಂಥಾಲಯ, ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಶನಿವಾರ ಮಾತನಾಡಿದರು. ಈ ವರ್ಷದ ಅನುದಾನಕ್ಕೆ ಬೇಡಿಕೆ ಇಟ್ಟರೆ ಹಿಂದಿನ ವರ್ಷದ ಹಣದಲ್ಲಿ ಅಡ್ಜೆಸ್ಟ್ ಮಾಡಿಳ್ಳುವಂತೆ ಸರ್ಕಾರ ತಿಳಿಸುತ್ತದೆ. ಶಾಸಕರು ಸಂಪೂರ್ಣ ಅನುದಾನ ಬಳಕೆ ಮಾಡಿಕೊಂಡಿಲ್ಲ ಎಂದು ಯಾವ ಅರ್ಥದಲ್ಲಿ ವಿಧಾನ ಸಭಾಧ್ಯಕ್ಷರು ಹೇಳಿದರೋ ಗೊತ್ತಿಲ್ಲ. ಅವರಿಗೆ ಪೂರ್ಣ ಮಾಹಿತಿ ಇಲ್ಲ ಎನಿಸುತ್ತದೆ ಎಂದರು.
ಹ್ಯಾಳ್ಯಾ ಗ್ರಾಮ ಸೇರಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ 8 ಗ್ರಾಪಂ ಕೇಂದ್ರಗಳಲ್ಲಿ ಗ್ರಂಥಾಲಯಗಳ ಕಟ್ಟಡಕ್ಕೆ ಶಾಸಕರ ಅನುದಾನದಲ್ಲಿ 25 ಲಕ್ಷ ರೂ. ನೀಡಲಾಗಿದೆ. ಹ್ಯಾಳ್ಯಾ ಶಾಲೆಯ ಆವರಣ ತಾಲೂಕು ಮಟ್ಟದ ಮೈದಾನದಂತೆ ವಿಶಾಲವಾಗಿದ್ದು, ನರೇಗಾದಡಿ 1 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಗೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ, ಹ್ಯಾಳ್ಯಾ ಗ್ರಾಪಂ ಅಧ್ಯಕ್ಷ ಪಿ.ಎಚ್.ಡಿ.ಆರ್.ರಾಘವೇಂದ್ರ, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ, ತಹಸೀಲ್ದಾರ್ ಎಂ.ಕುಮಾರಸ್ವಾಮಿ ಇದ್ದರು.