ಕೊಟ್ಟೂರು: ಪಟ್ಟಣದಲ್ಲಿ 2021ರಲ್ಲಿ ಸಿರಿಗೆರೆ ಪೀಠದ ತರಳಬಾಳು ಹುಣ್ಣಿಮೆ ಏರ್ಪಡಿಸುತ್ತಿರುವುದು ಸಂತೋಷದ ಸಂಗತಿ ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು. ಸಿರಿಗೆರೆ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬಸವಣ್ಣನವರ ತತ್ವ ಆದರ್ಶಗಳನ್ನು ಪ್ರಚಾರ ಪಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕೊಟ್ಟೂರಿನಲ್ಲಿ ಎಲ್ಲಾ ವರ್ಗದವರು ಭಾಗವಹಿಸಬೇಕಾದ ಕಾರ್ಯಕ್ರಮ ಏರ್ಪಡಿಸುತ್ತಿರುವುದು ಸಂತೋಷದ ವಿಚಾರ. ಶ್ರೀಗಳು ನೀರಾವರಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ರೈತರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಿರುವುದು ಹೆಮ್ಮೆ ಮೂಡಿಸಿದೆ. ತರಳಬಾಳು ಹುಣ್ಣಿಮೆ ಮೂಲಕ ಶ್ರೀಗಳು ಕೊಟ್ಟೂರು ಕೆರೆಗೆ ನೀರು ತುಂಬಿಸುವ ಯೋಜನೆ, ನೀರಾವರಿಗೆ ಮುತುವರ್ಜಿ ವಹಿಸಬೇಕು ಎಂದರು. ಬೇವೂರಿನ ಕರಿಬಸಜ್ಜ ಮಾತನಾಡಿ, ಸಿರಿಗೆರೆ ಶ್ರೀಗಳು ಕೆರೆ ನೀರು ತುಂಬಿಸುವ ಯೋಜನೆಗೆ ಒತ್ತು ನೀಡುತ್ತಿದ್ದಾರೆ. ನಮ್ಮ ಭಾಗದ ಕೆರೆಗಳನ್ನು ತುಂಬಿಸಿದರೆ, ಪುಣ್ಯ ಬರುತ್ತದೆ ಎಂದರು.