ದಾವಣಗೆರೆ: ಕೊಟ್ಟೂರು ಕ್ಷೇತ್ರದ ಶ್ರೀ ಗುರುಬಸವೇಶ್ವರ ಸ್ವಾಮಿ ರಥೋತ್ಸವ ಫೆ. 16 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ದಾವಣಗೆರೆಯಿಂದ -ಕೊಟ್ಟೂರಿಗೆ ಪಾದಯಾತ್ರೆ ಮೂಲಕ ತೆರಳುವ ಯಾತ್ರಾರ್ಥಿಗಳಿಗೆ ಫೆ.13ರ ಸಂಜೆ 5ಕ್ಕೆ ನಗರದ ಬಕ್ಕೇಶ್ವರ ಮಹಾಸ್ವಾಮಿ ದೇವಸ್ಥಾನದಲ್ಲಿ ಬೀಳ್ಕೊಡುಗೆ ಹಮ್ಮಿಕೊಳ್ಳಲಾಗಿದೆ.
ಇದು 44ನೇ ವರ್ಷದ ಪಾದಯಾತ್ರೆಯಾಗಿದೆ. 25 ಸಾವಿರ ಯಾತ್ರಿಗಳು ಸುಮಾರು 65 ಕಿ.ಮೀ.ವರೆಗೆ ಯಾತ್ರೆಯಲ್ಲಿ ತೆರಳುವರು. ವಿವಿಧೆಡೆ ದಾನಿಗಳಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ತಜ್ಞ ವೈದ್ಯರು, ಶುಶ್ರೂಷಕರಿಂದ ವೈದ್ಯಕೀಯ ಸೇವೆ ಕೂಡ ಇರಲಿದೆ ಎಂದುಪಾದಯಾತ್ರೆ ಟ್ರಸ್ಟ್ ಸಮಿತಿ ಅದ್ಯಕ್ಷ ಕಣಕಪ್ಪಿ ಮುರುಗೇಶಪ್ಪ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಪಾದಯಾತ್ರೆಯು ಬಿ. ಕಲಪನಹಳ್ಳಿ. ಬಿ. ಚಿತ್ತಾನಹಳ್ಳಿ, ಜಂಬುಲಿಂಗನಹಳ್ಳಿ, ಸತ್ತೂರು, ಕಂಚಿಕೆರೆ, ಕ್ಯಾರಕಟ್ಟೆ ಕಾವಲಹಳ್ಳಿ ಕ್ರಾಸ್, ತೌಡೂರು, ಅರಸೀಕೆರೆ, ಕಡಬಗೆರೆ, ಸಾಸ್ವಿಹಳ್ಳಿ, ಮತ್ತಿಹಳ್ಳಿ, ಕನ್ನಕಟ್ಟೆ, ಅಯ್ಯನಹಳ್ಳಿ ಮೂಲಕ ಕೊಟ್ಟೂರು ತಲುಪಲಿದೆ ಎಂದು ಮಾಹಿತಿ ನೀಡಿದರು.
ಫೆ.13ರಂದು ನಡೆಯುವ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಹೆಬ್ಬಾಳ್ನ ಮಹಾಂತ ರುದ್ರೇಶ್ವರ ಶ್ರೀ, ಅಯ್ಯನಹಳ್ಳಿಯ ಮಹೇಶ್ವರ ಶಿವಾಚಾರ್ಯ ಶ್ರೀ, ಕೊಟ್ಟೂರು ಶಂಕರ ಶ್ರೀ, ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು.
ಕೈಗಾರಿಕೋದ್ಯಮಿ ಅಥಣಿ ವೀರಣ್ಣ ಅಧ್ಯಕ್ಷತೆ ವಹಿಸುವರು. ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರಪ್ಪ, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಪಾಲಿಕೆ ಸದಸ್ಯ ಬಿ.ಜಿ.ಅಜಯಕುಮಾರ್ ಭಾಗವಹಿಸುವರು ಎಂದು ತಿಳಿಸಿದರು.
ಫೆ.14 ರಂದು ಸಂಜೆ 4 ಗಂಟೆಗೆ ಅರಸೀಕೆರೆಯ ಶ್ರೀ ಗುರು ಕೋಲಶಾಂತೇಶ್ವರ ವಿರಕ್ತಮಠದಲ್ಲಿ ಶಾಂತಲಿಂಗ ದೇಶಿಕೇಂದ್ರ ಶ್ರೀ, ಡಾ.ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ 25ನೇ ವರ್ಷದ ಔಷಧೋಪಚಾರದ ಸೇವೆಯ ಸಮಾರೋಪ ನಡೆಯಲಿದೆ ಎಂದರು.
ಮಲ್ಲಾಬಾದಿ ಗುರುಬಸವರಾಜ್, ಬಿ.ಚಿದಾನಂದ, ಸಿ.ಆರ್. ಜಯ ರಾಜ್, ಜೋಳದ ಕೊಟ್ರಪ್ಪ, ಕಂಬಿನೂಲು ರುದ್ರಕುಮಾರ್, ಬೂಸ್ನೂರು ಸುಜಾತಾ, ವಿನುತಾ ರವಿಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.