ಕೊಟ್ಟೂರು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ ಖಂಡಿಸಿ ಡಾ.ಅಂಬೇಡ್ಕರ್ ನಗರದ ಯುವಕರು ಗುರುವಾರ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇದ್ದವರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಸಹಜ ಹೆರಿಗೆ ಆಗುವುದಿದ್ದರೂ ಕಷ್ಟವೆಂದು ಬೇರೆ ಆಸ್ಪತ್ರೆಗೆ ಕಳುಹಿಸುತ್ತಾರೆ. ಇಲ್ಲೇ ಹೆರಿಗೆ ಮಾಡಿಸಿ ಅಂದರೆ ಸಿಬ್ಬಂದಿ ಹಣ ಕೇಳ್ತಾರೆ. ಆಸ್ಪತ್ರೆಯಲ್ಲಿ ಔಷಧ ಇದ್ದರೂ ಮೆಡಿಕಲ್ ಶಾಪ್ಗೆ ಚೀಟಿ ಬರೆದು ಕೊಡಲಾಗುತ್ತದೆ. ಬೈಕ್ ಅಪಘಾತದಲ್ಲಿ ಬುಧವಾರ ಗಾಯಗೊಂಡ ಸವಾರನಿಗೆ ಸೂಕ್ತ ಚಿಕಿತ್ಸೆ ನೀಡದೆ ದಾವಣಗೆರೆ ಆಸ್ಪತ್ರೆಗೆ ಕಳಿಸಲಾಯಿತು. ಆತನ ಕಿವಿ, ಮೂಗಿನಲ್ಲಿ ರಕ್ತ ಸೋರುತ್ತಲೆ ಇತ್ತು. ಗಾಯಾಳು ಮೃತಪಟ್ಟಿದ್ದರೆ ಯಾರು ಹೊಣೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮೂರು ದಿನದಿಂದ ನನ್ನ ಮಗನಿಗೆ ಜ್ವರ ಬಂದಿದ್ದು, ಇಲ್ಲಿ ಸೇರಿಸಲಾಗಿದೆ. ಆದರೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಸ್ಥಳದಲ್ಲಿದ್ದ ಮೂಗಪ್ಪ ಹಾಗೂ ಕುಡಿತಿನಮಗ್ಗಿ ಸುವರ್ಣಮ್ಮ ಆರೋಪಿಸಿದರು.
ಆಸ್ಪತ್ರೆ ಕುಂದುಕೊರತೆ ಬಗ್ಗೆ ಲಿಖಿತ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ವೈದ್ಯಾಧಿಕಾರಿ ಬದ್ಯಾನಾಯ್ಕ ಭರವಸೆ ನೀಡಿದರು. ಮುಖಂಡರಾದ ಬದ್ದಿ ಮಂಜುನಾಥ, ಕನ್ನಾಕಟ್ಟಿ ಶಿವು, ವಿಷ್ಣು, ರೋಹಿತ್, ಕ್ಯಾರಕಟ್ಟೆ ಗಣೇಶ, ವಿಜಯ್ ಇತರರಿದ್ದರು.