ಕೊಟ್ಟೂರು: ಹರಾಜು ಪ್ರಕ್ರಿಯೆಯಲ್ಲಿ ಸವಾಲು ಕೂಗಿ ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳನ್ನು ಪಡೆದವರು ಹಣ ಕಟ್ಟಿಲ್ಲ. ಪಪಂ ಮುಖ್ಯಾಧಿಕಾರಿ ನೋಟಿಸ್ ನೀಡಿದರೂ ಸ್ಪಂದನೆ ಇಲ್ಲವಾಗಿದ್ದು, ತಲೆನೋವಾಗಿದೆ.
ಕಳೆದ ವರ್ಷ ಮೇನಲ್ಲಿ 24 ವಾಣಿಜ್ಯ ಮಳಿಗೆಗಳ ಪೈಕಿ 17 ಅಂಗಡಿಗಳನ್ನು ಹರಾಜಿನಲ್ಲಿ ಕೂಗಿ ಪಡೆದವರು ಇನ್ನೂ ಹಣ ಕಟ್ಟಿಲ್ಲ. ಈ ಕುರಿತು ಎರಡು ನೋಟಿಸ್ ನೀಡಿದರೂ ಉತ್ತರಿಸಿಲ್ಲ. ಮುಖ್ಯಾಧಿಕಾರಿ ಕೊನೆಯದಾಗಿ ಮೂರನೇ ನೋಟಿಸ್ ನೀಡಿದ್ದಾರೆ. ಇದಕ್ಕೂ ಉತ್ತರಿಸದೆ, ಹಣ ಕಟ್ಟದಿದ್ದರೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗುತ್ತದೆ. ಅವರ ಮಾರ್ಗದರ್ಶನದ ಅನ್ವಯ ಮುಂದಿನ ಕ್ರಮಕೈಗೊಳ್ಳಲು ಪಪಂ ನಿರ್ಧರಿಸಿದೆ.
ಪಟ್ಟಣದಲ್ಲಿ ಪಂಚಾಯಿತಿಯ ಒಟ್ಟು 81 ವಾಣಿಜ್ಯ ಮಳಿಗೆಗಳಿವೆ. ಈ ಪೈಕಿ 65 ಹರಾಜಿನಲ್ಲಿ ಕೂಗಿದವರು ಡೆಪಾಸಿಟ್ ಕಟ್ಟಿ ವಶಕ್ಕೆ ಪಡೆದು ಬಾಡಿಗೆ ಪಾವತಿಸಿದ್ದಾರೆ. ಆದರೆ, 24 ವಾಣಿಜ್ಯ ಮಳಿಗೆಗಳಲ್ಲಿ 17 ಅಂಗಡಿ ಪಡೆದವರು ಇಲ್ಲಿಯ ತನಕ ಪಪಂ ಜತೆ ಒಪ್ಪಂದ ಮಾಡಿಕೊಂಡಿಲ್ಲ. ಇದರಲ್ಲಿ ಕೆಲವರು ಬಾಡಿಗೆ ಅಧಿಕವಾಗಿದೆ ಎಂದು ಕೋರ್ಟ್ಗೆ ಹೋಗಿದ್ದಾರೆ ಎನ್ನುತ್ತಾರೆ ಮುಖ್ಯಾಧಿಕಾರಿ ಎ.ನಸರುಲ್ಲಾ.