ಕೊಟ್ಟೂರು: ಕೊಲೆ ಬೆದರಿಕೆ ಪತ್ರಗಳೇ ನನಗೆ ಪ್ರೇಮಪತ್ರಗಳು ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು. ತಮಗೆ 16ನೇ ಕೊಲೆ ಬೆದರಿಕೆ ಪತ್ರ ಅಂಚೆ ಮೂಲಕ ಬಂದಿರುವ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹದಿನಾರೂ ಪತ್ರಗಳ ಕೈಬರಹ ಒಂದೇ ರೀತಿಯಾಗಿದೆ. ಬೆದರಿಕೆ ಪತ್ರದಲ್ಲಿ ಅನೇಕ ಕಾಗುಣಿತ ದೋಷಗಳಿವೆ ಎಂದರು.
ನನಗೆ ಪತ್ರ ಬರೆಯುವ ಆಗಂತುಕ, ಸರಿಯಾಗಿ ಮತ್ತು ಸ್ಪಷ್ಟವಾಗಿ ಕನ್ನಡ ಬರೆಯುತ್ತಿಲ್ಲ. ಆತ ನನಗೆ ಸಿಕ್ಕರೆ ಖಂಡಿತ ಕನ್ನಡ ವರ್ಣಮಾಲೆ, ಕಾಗುಣಿತ ಮತ್ತು ಪತ್ರ ಬರೆಯುವ ಶೈಲಿಯನ್ನು ಕಲಿಸುವ ಇಚ್ಛೆ ಹೊಂದಿದ್ದೇನೆ ಎಂದರು.
ಇದನ್ನೂ ಓದಿ: ದಕ್ಷಿಣ ಭಾರತೀಯರು ಹಿಂದುಗಳು ಅಲ್ಲ, ನಾವೆಲ್ಲರೂ ದ್ರಾವಿಡರು : ಸಾಹಿತಿ ಕುಂ. ವೀರಭದ್ರಪ್ಪ
ಆತ ಹೀಗೆ ಕನಿಷ್ಠ 100 ಪತ್ರಗಳನ್ನು ನನಗೆ ಬರೆದರೆ, ಎಲ್ಲವನ್ನು ಒಟ್ಟುಗೂಡಿಸಿ ಪ್ರೇಮಪತ್ರಗಳು ಎಂದು ಹೆಸರಿಟ್ಟು ಪುಸ್ತಕ ಬಿಡುಗಡೆ ಮಾಡುತ್ತೇನೆ.
ತಿಂಗಳಿಗೆ, ಮೂರು ತಿಂಗಳಿಗೊಂದರಂತೆ ಪತ್ರ ಬರೆದರೆ, ಅವುಗಳನ್ನು ಜೋಪಾನವಾಗಿಡುವುದು ಕಷ್ಟವಾಗುತ್ತದೆ. ದಯವಿಟ್ಟು ದಿನಕ್ಕೆ ಒಂದಾದರೂ ಪತ್ರ ಬರೆದು ಪುಣ್ಯಕಟ್ಟಿಕೊ… ಎಂದು ಕುಂ.ವೀ. ಆಗಂತುಕನಿಗೆ ಮನವಿ ಮಾಡಿದರು.
ಪತ್ರದಲ್ಲಿ ಏನಿದೆ
ರಾಜ್ಯದಲ್ಲಿ ಕಂಪನ ಆಡಳಿತ ಪ್ರಾರಂಭವಾಗಿದೆ. ಹಿಂದು ಸಜ್ಜನರಿಗೆ ಇದು ಸಂಕಷ್ಟದ ಸರ್ಕಾರ. ನಿಮ್ಮ ಕುಲ ವೀರಭದ್ರ ನಿಮ್ಮಂತಹ ದುರ್ಜನ ದೇಶದ್ರೋಹಿಗಳಿಗೆ ಮತ್ತು ಮತಾಂಧ ಮುಸ್ಲಿಮರಿಗೆ, ಮತಾಂತರಿ ಕ್ರೈಸ್ತರಿಗೆ ಸಂಪ್ರಿಯಾ ಸರ್ಕಾರ.
ಉರಿಯಿರಿ ಮಕ್ಕಳಾ ಉರಿಯಿರೀ.., ಇಂದಲ್ಲ ನಾಳೆ ಅಧರ್ಮದಿಂದ ತುಂಬಿರುವ ನಿಮ್ಮಜೀವ ಎಂಬ ಅಜ್ಞಾನದ ದೀಪ ಆರುವುದು ನಿಶ್ಚಿತ ನಿಶ್ಚಿತ ಕುಂ.ವೀರಭದ್ರದ್ರ ನಿಶ್ಚಿತ ನಿನ್ನ ಅಂತ್ಯ ಎಂದು ಬರೆದಿದೆ. ಕೊಟ್ಟೂರು ಪೊಲೀಸರು ಬೆದರಿಕೆ ಪತ್ರವನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.