ಕೊಟ್ಟೂರು: ಹಗರಿಬೊಮ್ಮನಹಳ್ಳಿ ಎಸ್.ಸಿ. ಮೀಸಲು ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಡಾ. ಸುರೇಶ ಕುಮಾರ್ ಅವರ ಎಸ್ಸಿ ಪ್ರಮಾಣ ಪತ್ರದ ಬಗ್ಗೆ ಸಂಶಯವಿದ್ದು, ಜಿಲ್ಲಾಧಿಕಾರಿ ತನಿಖೆ ನಡೆಸಬೇಕೆಂದು ಹಬೊಹಳ್ಳಿ ಅಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ.ಹನುಮಂತಪ್ಪ ಒತ್ತಾಯಿಸಿದರು.
ಚುನಾವಣಾ ಆಯೋಗಕ್ಕೆ ದೂರು
ಪಟ್ಟಣದ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಡಾ. ಸುರೇಶ ಕುಮಾರ್ ಅವರ ವಂಶವೃಕ್ಷ ಇತರ ದಾಖಲೆಗಳನ್ನು ಸಂಗ್ರಹಿಸಿದ್ದು, ಈ ಕುರಿತು ಜಿಲ್ಲಾಧಿಕಾರಿ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ತನಿಖೆಗೆ ಆಗ್ರಹಿಸಲಾಗುವುದು ಎಂದರು.
ಹಬೊಹಳ್ಳಿ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಂಗಮರಿದ್ದಾರೆ. ಆದರೆ ಡಾ.ಸುರೇಶ ಕುಮಾರ್ಗೆ ಮಾತ್ರ ಎಸ್.ಸಿ. ದೃಢೀಕರಣ ಪತ್ರ ನೀಡಿರುವುದರ ಬಗ್ಗೆ ಎಸ್ಸಿ ಸಮುದಾಯ ಜಾಗೃತವಾಗಬೇಕು. ಮುಖ್ಯವಾಗಿ ಈ ಬಗ್ಗೆ ಕ್ಷೇತ್ರದ ಎಲ್ಲ ರಾಜಕೀಯ ಪಕ್ಷದ ಅಭ್ಯರ್ಥಿಗಳು ಎಚ್ಚರವಹಿಸಬೇಕು ಎಂದರು.
ಟಿಕೆಟ್ ನೀಡುವ ಮುನ್ನ ಯೋಚಿಸಲಿ
ಡಾ. ಸುರೇಶ ಕುಮಾರ್, ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಹಗರಿಬೊಮ್ಮನಹಳ್ಳಿ ವಿಧಾನಸಭೆಗೆ ಸ್ಪರ್ಧಿಸುತ್ತಿರುವುದರ ಬಗ್ಗೆ ಮಾಹಿತಿ ದೊರಕಿದ್ದು, ಇವರಿಗೆ ಕೆಆರ್ಪಿಪಿ ಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಟಿಕೆಟ್ ನೀಡಿದರೆ, ಎಸ್ಸ್ಸಿ ಸಮುದಾಯಕ್ಕೆ ಅನ್ಯಾಯ ಎಸಗಿದಂತ್ತಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಸುರೇಶ ಕುಮಾರ್ ನಿಜವಾಗಿಯೂ ಎಸ್.ಸಿ. ಸಮುದಾಯವೇ ಇಲ್ಲವೇ ಎಂಬುದನ್ನು ಆತ್ಮವಿಮರ್ಶೆಮಾಡಿಕೊಳ್ಳಬೇಕು. ಅಲ್ಲದೆ ಕ್ಷೇತ್ರದ ಜನತೆ ಹಾಗೂ ಎಸ್.ಸಿ. ಸಮುದಾಯದವರು ಸಾಮಾಜಿಕವಾಗಿ ಮೇಲ್ವರ್ಗದಲ್ಲಿದ್ದು, ಸರ್ಕಾರಿ ಸೌಲಭ್ಯಕ್ಕಾಗಿ ಎಸ್ಸ್ಸಿ ಜಾತಿ ದೃಢೀಕರಣ ಪಡೆಯುವುದು ಯಾವ ನ್ಯಾಯ?. ಇವರಿಗೆ ದೃಢೀಕರಣ ಪತ್ರಕೊಟ್ಟ ಅಧಿಕಾರಿ ಮೇಲೂ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟವನ್ನು ಪಕ್ಷದಿಂದ ಹಮ್ಮಿಕೊಳ್ಳುವುದಾಗಿ ಹೇಳಿದರು.
ಇದನ್ನೂ ಓದಿ:https://www.vijayavani.net/g-janardhana-reddy-aruna-lakshmi-ballari-kalyana-rajya-pragati-paksha-karnataka-assembly-election-krpp/