ಕೊಪ್ಪಳ: ತಾಲೂಕಿನ ಹೊಳೆಮುದ್ಲಾಪುರ ಅರಣ್ಯ ಪ್ರದೇಶದಲ್ಲಿ ಬೆಳೆದ ಶ್ರೀಗಂಧದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.ವಿಜಯನಗರ ಜಿಲ್ಲೆ ಸಂಡೂರು ತಾಲೂಕಿನ ಬಾವಳ್ಳಿ ಗ್ರಾಮದ ಎಂ.ಮಾಲಿಂಗಪ್ಪ ಮೇದಾರ್, ದುರ್ಗಾ ನಾಯ್ಕ ಉಗ್ಗಿ, ಮಲ್ಲೇಶ್ ಮೇದಾರ್ ಬಂಧಿತರು. ಇವರು ಆ.30ರಂದು ಗಸ್ತು ತಿರುಗುತ್ತಿದ್ದ ಅರಣ್ಯ ರಕ್ಷಕರ ಕಣ್ಣಿಗೆ ಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ಕಳ್ಳರ ವಿರುದ್ಧ ಅರಣ್ಯ ಇಲಾಖೆ ಅಧಿನಿಯಮ 1963ರ ಸೆಕ್ಷನ್ 80, 84 ಮತ್ತು 86 ಅನ್ವಯ ಪ್ರಕರಣ ದಾಖಲಾಗಿದೆ.