ಕೊಪ್ಪಳ: ಸಮ್ಮೇಳನದ ಸಂಕಿರಣಗಳಲ್ಲಿ ಅರ್ಥಪೂರ್ಣ ಚರ್ಚೆಗಳು ಹೊರಬಂದವು. ‘ಬತ್ತಿಹೋದ ಕೊಳವೆಬಾವಿ ಪುನಶ್ಚೇತನ ಹಾಗೂ ಜಲ ಸಂರಕ್ಷಣೆ’ ಬಗ್ಗೆ ಉಪನ್ಯಾಸ ನೀಡಿದ ಚಿತ್ರದುರ್ಗದ ಜಲ ತಜ್ಞ ದೇವರಾಜ ರಡ್ಡಿ, 70 ವರ್ಷದ ಹಿಂದೆ ಕೊಳವೆ ಬಾವಿ ಬಂತು. ಹಿಂದೆ, ನದಿ, ಹಳ್ಳದ ನೀರನ್ನು ಬಳಸಲಾಗುತ್ತಿತ್ತು. ಆರೋಗ್ಯ ಚೆನ್ನಾಗಿರಲು ಮಳೆ ನೀರು ಸಂಗ್ರಹಿಸಿ ಕುಡಿಯಬೇಕು. ಗುಣಮಟ್ಟದ ನೀರು ಸೇವಿಸಬೇಕು. ಮಳೆ ನೀರನ್ನು ನಮ್ಮ ನೀರೆಂದು ಸಂಗ್ರಹಿಸಬೇಕು. ತಂತ್ರಜ್ಞಾನ ಇಷ್ಟೊಂದು ಬೆಳೆದರೂ ಜನರಿಗೆ ಶುದ್ಧ ಕುಡಿವ ನೀರು ಸಿಗುತ್ತಿಲ್ಲ ಎಂದರು.
ತಾಲೂಕಿನ ಮಹಿಳಾ-ಸಾಹಿತ್ಯ-ಸಂವೇದನೆ ಬಗ್ಗೆ ಉಪನ್ಯಾಸ ನೀಡಿದ ಸಾಹಿತಿ ಸುಮತಿ ಹಿರೇಮಠ, ಮಹಿಳಾ ಸಾಹಿತ್ಯಕ್ಕೆ ಸಿಕ್ಕ ಪಾಲು ಕಡಿಮೆ. ಮಹಿಳೆಯರ ಸಾಹಿತ್ಯ ಮೂಲೆಗುಂಪು ಮಾಡುವ ಹುನ್ನಾರ ನಡೆಯುತ್ತಿದೆ. ಮಹಿಳೆಯರ ಸಂವೇದನೆಯಲ್ಲಿ ಮುಸ್ಲಿಂ, ದಲಿತ, ಹಿಂದು ಎಂದು ವರ್ಗೀಕರಣ ಮಾಡುವುದು ಸರಿಯಲ್ಲ. ಹೆಣ್ಣು ಪಡೆವ ವೈಶಿಷ್ಟೃಗಳನ್ನು ಕೀಳಾಗಿ ಪರಿವರ್ತನೆ ಮಾಡುವ ನೆಲೆ ಇದೆ. ಜಾತಿಯ ಮೇಲೆ ವಿರೋಧಿಸಿ ಹತ್ಯೆ, ಹಲ್ಲೆಗೊಳಗಾಗುತ್ತಿದ್ದಾಳೆ. ನಾಟಕದಲ್ಲಿ ಭಾಗವಹಿಸುವ ಮಹಿಳೆಯನ್ನು ನೋಡುವ ಕ್ರಮ ವಿಚಿತ್ರವಾಗಿದೆ. ವಚನ ಸಾಹಿತ್ಯದಲ್ಲಿ ಹೆಣ್ಣಿಗೆ ಸಮಾನ ಸ್ಥಾನಮಾನ ಸಿಕ್ಕಿದೆ ಎಂದರು.
ಕವಿಗೋಷ್ಠಿಯಲ್ಲಿ ಹಲವು ಕವಿಗಳು ಭಾಗವಹಿಸಿ ಕವಿತೆ ವಾಚಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಸೋಮರೆಡ್ಡಿ ಅಳವಂಡಿ ಆಶಯ ನುಡಿಗಳನ್ನಾಡಿದರು. ಉಪನ್ಯಾಸಕ ಶರಣಬಸಪ್ಪ ಬಿಳಿಎಲೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಡಿ.ಎಂ.ಬಡಿಗೇರ, ಡಾ.ನಿಂಗಪ್ಪ ಕಂಬಳಿ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಇತರರಿದ್ದರು.