ಕೊಪ್ಪಳ: ಕೇಂದ್ರ ಸರ್ಕಾರ ಜನ ವಿರೋಧಿ ಬಜೆಟ್ ಮಂಡಿಸಿದೆ ಎಂದು ಆರೋಪಿಸಿ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ಭಾನುವಾರ ನಗರದ ಕೇಂದ್ರೀಯ ಬಸ್ ನಿಲ್ದಾಣ ಎದುರು ಪ್ರತಿಭಟನೆ ನಡೆಸಿತು.
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಂಬಂಧಿಸಿ ಪ್ರಮುಖ ಘೋಷಣೆ ಮಾಡಿಲ್ಲ. ನರೇಗಾ ಯೋಜನೆ ಮೊತ್ತ ಶೇ.33 ಇಳಿಕೆ ಮಾಡುವ ಮೂಲಕ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನು ನಿರ್ಲಕ್ಷಿಸಿದ್ದು, ಮತ್ತೆ ಕೆಲಸ ಅರಸಿ ಗುಳೆ ಹೋಗುವಂತೆ ಮಾಡಿದೆ. ಶೇ.75 ಉಜ್ವಲ ಯೋಜನೆ ಸೇರಿದಂತೆ ಪೆಟ್ರೋಲಿಯಂ ಮೇಲಿನ ಸಬ್ಸಿಡಿ ಹಂಚಿಕೆ ತಗ್ಗಿಸಲಾಗಿದೆ. ಇದು ಜನರ ಮೇಲೆ ಹೊರೆ ಹೇರಲಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ 11687.51 ಕೋಟಿ ರೂ. ಮೊತ್ತವನ್ನು 1159.51 ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಕಠಿಣ ನಿಯಮಗಳಿಂದ ಆರೋಗ್ಯಕ್ಕಾಗಿ ಮೀಸಲಿಟ್ಟ 9255 ಕೋಟಿ ರೂ.ಖರ್ಚಾಗದೆ ಉಳಿದಿದೆ. ಅಲ್ಲದೆ, ಶಿಕ್ಷಣಕ್ಕಾಗಿ ತೆಗೆದಿಟ್ಟ 4297 ಕೋಟಿ ರೂ. ಖರ್ಚಾಗಿಲ್ಲ. ಸರ್ಕಾರವು ರಾಜ್ಯಗಳಿಗೆ ಸಮರ್ಪಕವಾಗಿ ಹಣಕಾಸು ವರ್ಗಾವಣೆ ಮಾಡದಿರುವುದು ಇದಕ್ಕೆಲ್ಲ ಕಾರಣ. ಇದು ಕಲ್ಯಾಣ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕಾರ್ಪೋರೇಟ್ ತೆರಿಗೆಯಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಒಟ್ಟಾರೆ ಕೇಂದ್ರ ಸರ್ಕಾರ, ಶ್ರೀಮಂತ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಮುಂದುವರಿಸಿದ್ದು, ಜನವಿರೋಧಿ ಮತ್ತು ಕಾರ್ಪೋರೇಟ್ ಪರವಾಗಿ ಬಜೆಟ್ ಮಂಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎನ್.ಬಸವರಾಜ, ಜಿಲ್ಲಾ ಕಾರ್ಯದರ್ಶಿ ಸುಂಕಪ್ಪ ಗದಗ, ಪ್ರಮುಖರಾದ ಫಕೀರಮ್ಮ ಮಿರಗನತಂಡಿ, ಅಮರವ್ವ ಗದಗ, ಗಂಗಮ್ಮ ಎಲಿಗಾರ, ಮೈಲಾರಿ ಗದುಗಿನಮನಿ, ಮಂಜಪ್ಪ, ಹುಸೇನಮ್ಮ ಗದುಗಿನಮನಿ ಇತರರಿದ್ದರು.