ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಗವಿಶ್ರೀ ಕಪ್ ರಾಜ್ಯಮಟ್ಟದ ಹಾರ್ಡ್ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಜ.30ರಿಂದ ಆರಂಭವಾಗಲಿದ್ದು, ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡಲಿದ್ದಾರೆಂದು ಕ್ರೀಡಾಕೂಟ ಆಯೋಜಕ ಶ್ರವಣಕುಮಾರ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ವಿವಿಧ ಭಾಗಗಳಿಂದ 52 ತಂಡಗಳು ಕ್ರೀಡಾಕೂಟದಲ್ಲಿ ಭಾಗಿಯಾಗಲಿವೆ. ತಲಾ 12 ಓವರ್ ಪಂದ್ಯ ಇರಲಿದ್ದು, ಪ್ರಥಮ ಬಹುಮಾನ 2.50 ಲಕ್ಷ ರೂ., ದ್ವಿತೀಯ 1 ಲಕ್ಷ ರೂ., ತೃತೀಯ 50 ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿ ಹೊಂದಿದೆ. ಟೂರ್ನಮೆಂಟ್ನಲ್ಲಿ ಭಾಗಿಯಾಗುವ ತಂಡದವರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.
ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ ಇತರರು ಭಾಗಿಯಾಗಲಿದ್ದಾರೆಂದು ತಿಳಿಸಿದರು. ಆಯೋಜಕ ಸೈಯದ್ ಮಹಿಮೂದ್ ಹುಸೇನ್, ಕ್ರಿಕೆಟಿಗ ಮೈನುದ್ದೀನ್ ವರ್ದಿ ಇದ್ದರು.