ಕೊಪ್ಪಳ: ದೇಶದ ರಕ್ಷಣೆ, ಸಾಮರಸ್ಯ, ಆರ್ಥಿಕತೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಡಳಿತ ವೈಫಲ್ಯ ಮುಚ್ಚಿಡಲು ಇ.ಡಿ. ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ನ್ಯಾಷನಲ್ ಹೆರಾಲ್ಡ್ ಬ್ರಿಟಿಷರ ವಿರುದ್ಧ ದನಿ ಎತ್ತಿದ ಪತ್ರಿಕೆ. ಪತ್ರಕರ್ತರಿಗೆ ಹಣ ನೀಡಲಾಗದ ಕಾರಣ ಕಾಂಗ್ರೆಸ್ ದುಡ್ಡು ನೀಡಿದೆ. ಅದರಿಂದ ಯಾರೂ ಲಾಭ ಗಳಿಸಿಲ್ಲ. ಏರಪೋರ್ಟ್ ಬಳಿ 50 ಕೋಟಿ ರೂ.ಗೆ 100 ಎಕರೆ ಜಾಗ ನೀಡಲಾಗಿದೆ. ಈಗ ಅದರ ಬೆಲೆ ಸಾವಿರ ಕೋಟಿ ರೂ. ಮೇಲಾಗುತ್ತದೆ. ವಿನಾಕಾರಣ ಕೈ ನಾಯಕರನ್ನು ಟಾರ್ಗೆಟ್ ಮಾಡಿದರೆ ಜನ ಸುಮ್ಮನಿರಲ್ಲ. ಗುಂಡು ಹಾರಿಸಿದಾಗಲೆ ನಾವು ಹೆದರಿಲ್ಲ. ಇನ್ನು ಮೋದಿ ಸರ್ಕಾರಕ್ಕೆ ಹೆದರುತ್ತೀವಾ? ಗೋದ್ರಾ ಹತ್ಯೆ ಪ್ರಕರಣದಲ್ಲಿ ನಾವು ಮೋದಿಯನ್ನು ಎಲ್ಲಿಗೆ ಬೇಕಾದರೂ ಕಳಿಸಬಹುದಿತ್ತು. ಆದರೆ, ಕಾಂಗ್ರೆಸ್ ಯಾವತ್ತಿಗೂ ದ್ವೇಷ ರಾಜಕಾರಣ ಮಾಡಿಲ್ಲ ಎಂದರು.
ಕೇಂದ್ರ ಸರ್ಕಾರ ಕಳೆದ 5 ವರ್ಷದಲ್ಲಿ 4 ಲಕ್ಷ ಹುದ್ದೆ ತುಂಬಿದ್ದು, 40 ಲಕ್ಷ ಭರ್ತಿ ಮಾಡಿದ್ದೇವೆಂದು ಸುಳ್ಳು ಹೇಳುತ್ತಿದೆ. ಅಗ್ನಿಪಥಕ್ಕೆ ಆಯ್ಕೆಯಾದವರು ಯಾವ ಡಿಗ್ರಿ ಮಾಡಲಾಗಲ್ಲ. ಇದೊಂದು ತುಘಲಕ್ ಆಡಳಿತದ ಮಾದರಿ. ಮುಂದೆ ಯಾರೂ ಬರದಿದ್ದರೆ ಆರ್ ಎಸ್ಎಸ್ನವರನ್ನು ಮುಂದುವರೆಸುತ್ತೀರಾ?. ಅಗ್ನಿಪಥ ಯೋಜನೆ ವಾಪಸ್ ಪಡೆಯಬೇಕು. ಯುವಕರ ಪ್ರತಿಭಟನೆ ಹಿಂದೆ ಕಾಂಗ್ರೆಸ್ ಪಿತೂರಿ ಇದೆಯೆಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಪ್ರತಿಭಟನೆ ನಡೆಯುತ್ತಿರುವ ರಾಜ್ಯದಲ್ಲಿ ಯಾರು ಆಡಳಿತ ನಡೆಸುತ್ತಿದ್ದಾರೆಂದು ಪ್ರಶ್ನಿಸಿದರು.
ಈವರೆಗೆ ಹೇಳಿದ ಸುಳ್ಳುಗಳಿಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು. ರಾಜ್ಯ ಸರ್ಕಾರದದ ಶೇ.40 ಭ್ರಷ್ಟಾಚಾರ, ಕೋಟಿ ಕೋಟಿ ಉದ್ಯೋಗ ಸೃಷ್ಟಿ ಎಲ್ಲದರ ಬಗ್ಗೆ ಉತ್ತರಿಸಲಿ.
| ವಿ.ಎಸ್.ಉಗ್ರಪ್ಪ ಮಾಜಿ ಸಂಸದ