ಕೊಪ್ಪಳ: ತಾಲೂಕಿನ ಭಾಗ್ಯನಗರ ಪಟ್ಟಣ ವ್ಯಾಪ್ತಿ ಗ್ರಾಪಂ ಅವಧಿಯಲ್ಲಿ ನಿರ್ಮಾಣವಾದ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಫಾರ್ಮ್ 3 ವಿತರಿಸುವಂತೆ ಆಗ್ರಹಿಸಿ ಪಟ್ಟಣ ನಿವಾಸಿಗಳು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಭಾಗ್ಯನರ ಇತ್ತಿಚೆಗೆ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿದೆ. ಇದಕ್ಕು ಮೊದಲ ಗ್ರಾಪಂ ಇದ್ದಾಗ ತಹಸೀಲ್ದಾರ್, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರಿಂದ ನಿಯಮಾನುಸಾರ ಎನ್ಎ ಮಾಡಿದ ಬಡಾವಣೆಗಳಿವೆ. ಗ್ರಾಪಂನಲ್ಲಿ ಆಸ್ತಿ ನೋಂದಣಿಯಾಗಿದ್ದು, 9,11 ಸಹ ಇವೆ. ಅಂತಹ ಆಸ್ತಿಗಳಿಗೆ ಫಾರ್ಮ್ 3 ವಿತರಿಸುವಂತೆ ಸರ್ಕಾರ ಆದೇಶಿಸಿದೆ. ಆದರೆ, ಅಧಿಕಾರಿಗಳು ವಿತರಣೆ ಮಾಡುತ್ತಿಲ್ಲ. ಈ ಸಂಬಂಧ ಮಾ.3ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ, ಶಾಸಕ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆದಿದ್ದು, ವಿತರಣೆಗೆ ಅಧಿಕಾರಿಗಳು ಸೂಚಿಸಿದ್ದಾರೆ. ಆಗ ತಾತ್ಕಾಲಿಕವಾಗಿ ವಿತರಿಸಿದ ಅಧಿಕಾರಿಗಳು ಈಗ ನೀಡುತ್ತಿಲ್ಲವೆಂದು ಪ್ರತಿಭಟನಕಾರರು ಆರೋಪಿಸಿದರು.
ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ವಿನಾ ಕಾರಣ ಫಾರ್ಮ್ 3 ನೀಡುತ್ತಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ. ಆಸ್ತಿ ಮಾರಾಟ, ಸಾಲ ಪಡೆಯುವುದು ಮುಂತಾದ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೂ ಧರಣಿ ಮುಂದುವರಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಹೋರಾಟ ಸಮಿತಿ ಅಧ್ಯಕ್ಷ ಗ್ಯಾನೇಶ ಹ್ಯಾಟಿ, ಚನ್ನಪ್ಪ ತಟ್ಟಿ, ಶಂಕ್ರಪ್ಪ ಲಿಂಗನಬಂಡಿ, ಜಗದೀಶ ತೆಗ್ಗಿನಮನಿ, ಪರಶುರಾಮ ನಾಯಕ, ವಿಜಯ ಪಾಟೀಲ್, ಜಯಮಾಲಾ, ಸುರೇಶ ದರಗದಕಟ್ಟಿ, ಸುರೇಶ ಪೆದ್ದಿ ಹಾಗೂ ನೂರಾರು ಜನರಿದ್ದರು.