ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಶ್ರೀ ರಾಕಸಮ್ಮನ ಹಬ್ಬದ ಅಂಗವಾಗಿ ಉಪ್ಪಾರ ಸಮುದಾಯ ವತಿಯಿಂದ ಬುಧವಾರ ಶ್ರೀ ಸಿದ್ದಪ್ಪಾಜಿ ಕಂಡಾಯ ಹಾಗೂ ದೊಡ್ಡಮ್ಮತಾಯಿ ಸತ್ತಿಗೆ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು.
ಗ್ರಾಮದಲ್ಲಿರುವ ಆಂಜನೇಯಪುರ ದೇವಾಲಯದಲ್ಲಿ ಸಿದ್ದಪ್ಪಾಜಿ ಕಂಡಾಯ, ಬಸವ, ದೊಡ್ಡಮ್ಮತಾಯಿ ಸತ್ತಿಗೆಗೆ ಹೂ-ಹೊಂಬಾಳೆ ಧರಿಸಿ ದೇವರು ಗುಡ್ಡರು ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ ಗ್ರಾಮದ ಬಸ್ ನಿಲ್ದಾಣ ಬಳಿ ಸಿದ್ದಪಡಿಸಿದ್ದ ಕೊಂಡದ ಮಾಳಕ್ಕೆ ಮೆರವಣಿಗೆ ಮೂಲಕ ಕಂಡಾಯಗಳನ್ನು ದೇವರು ಗುಡ್ಡರು ಹೊತ್ತು ತಂದು ಶ್ರದ್ಧಾ-ಭಕ್ತಿಯಿಂದ ಕೊಂಡ ಹಾಯ್ದರು.
ಈ ವೇಳೆ ನೆರೆದಿದ್ದ ಭಕ್ತ ಸಮೂಹ ಶ್ರೀ ಸಿದ್ದಪ್ಪಾಜಿ ಹಾಗೂ ರಾಕಸಮ್ಮನ ಪರವಾಗಿ ಜೈಕಾರ ಕೂಗಿದರು. ಕಂಡಾಯ, ಬಸವ, ಸತ್ತಿಗೆ ಕೊಂಡ ಹಾಯ್ದ ಬಳಿಕ ಕೊಂಡದ ದೂಳ್ತವನ್ನು ಹಣೆ ಹಚ್ಚಿಕೊಂಡು ಭಕ್ತಿ ಮೆರೆದರು.
ಕೊಂಡೋತ್ಸವ ಹಿನ್ನೆಲೆಯಲ್ಲಿ ತಳಿರು, ತೋರಣ, ದೀಪಾಲಂಕಾರ ಹಾಗೂ ರಂಗೋಲಿಯಿಂದ ಸಿಂಗರಿಸಲಾಗಿತ್ತು. ಕೊಂಡೋತ್ಸವ ಬಳಿಕ ಕಂಡಾಯ, ಸತ್ತಿಗೆಗಳನ್ನು ಮೆರವಣಿಗೆ ನಡೆಯಿತು. ಹನೂರು ಶಾಸಕ ಎಂ.ಆರ್.ಮಂಜುನಾಥ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸೇರಿದಂತೆ ಗ್ರಾಮದ ಯಜಮಾನರು ಮತ್ತು ಮುಖಂಡರು ಇದ್ದರು.