ಕೊಲ್ಕತ : ಟಿಎಂಸಿ ನಾಯಕಿ ಹಾಗೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಮೇಲೆ ಕೊಲ್ಕತ ಹೈಕೋರ್ಟ್ 5 ಲಕ್ಷ ರೂ.ಗಳ ದಂಡ ವಿಧಿಸಿದೆ. ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಗೆಲುವಿನ ವಿರುದ್ಧದ ಕೇಸನ್ನು ನ್ಯಾಯಮೂರ್ತಿ ಕೌಶಿಕ್ ಚಂದ ಅವರು ವಿಚಾರಣೆ ನಡೆಸಬಾರದೆಂದು ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸುತ್ತಾ, ಕೋರ್ಟ್ ಈ ಆದೇಶ ಹೊರಡಿಸಿದೆ.
ನ್ಯಾಯಾಧೀಶರಾಗಿ ನೇಮಕವಾಗುವ ಮುನ್ನ ತಮ್ಮ ವಕಾಲತ್ತಿನ ದಿನಗಳಲ್ಲಿ ನ್ಯಾಯಮೂರ್ತಿ ಚಂದ ಅವರು ಬಿಜೆಪಿ ಸರ್ಕಾರಕ್ಕಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೇ ಕಾರಣವಾಗಿಟ್ಟುಕೊಂಡು, ನ್ಯಾಯಮೂರ್ತಿ ಚಂದ ಅವರು ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಕೇಸಿನಲ್ಲಿ ನಿಷ್ಪಕ್ಷಪಾತವಾದ ನಿರ್ಧಾರ ಕೈಗೊಳ್ಳಲಾರರು ಎಂಬ ಶಂಕೆ ವ್ಯಕ್ತಪಡಿಸಿದ್ದ ಬ್ಯಾನರ್ಜಿ ಅವರ ವಕೀಲರು, ಅವರ ಮುಂದಿನಿಂದ ಕೇಸನ್ನು ಬೇರೊಬ್ಬ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಕರೊನಾ ಬಂದೀತೆಂದು ಊರುಗಳಿಗೆ ಹೋಗಲು ಭಯವೇ? ಆತಂಕ ಬಿಡಿ, VRL ಬಸ್ ಹತ್ತಿ…
ಈ ಅರ್ಜಿಯು ಇಂದು ತಮ್ಮ ಮುಂದೆ ಬಂದಾಗ, ನ್ಯಾಯಮೂರ್ತಿ ಕೌಶಿಕ್ ಚಂದ ಅವರು, “ಒಬ್ಬ ನ್ಯಾಯಾಧೀಶರು ಒಂದು ರಾಜಕೀಯ ಪಕ್ಷದೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಿ ಅರ್ಜಿದಾರರು ಅವರನ್ನು ಪಕ್ಷಪಾತಿ ಎಂಬಂತೆ ಬಿಂಬಿಸುವುದು ಮೂರ್ಖತನ. ಹೀಗೆ ಕೇಸನ್ನು ವಿಚಾರಣೆ ಮಾಡುವ ಮುಂಚೆಯೇ ನನ್ನ ನಿರ್ಧಾರವನ್ನು ಬಾಧಿಸುವ ಪ್ರಯತ್ನ ಮಾಡಲಾಗಿದೆ” ಎಂದರು.
“ಜೂನ್ 18 ರ ವಿಚಾರಣೆಯ ತಕ್ಷಣ, ಟಿಎಂಸಿ ನಾಯಕರು ನನ್ನ ಫೋಟೋಗಳೊಂದಿಗೆ ಸಿದ್ಧರಾಗಿದ್ದು, ನಾನು ಬಿಜೆಪಿಯೊಂದಿಗೆ ನಂಟು ಹೊಂದಿದ್ದೇನೆ ಎಂದು ಟ್ವೀಟ್ಗಳನ್ನು ಮಾಡಲು ಆರಂಭಿಸಿದರು” ಎಂದು ವರ್ಗಾವಣೆಗೆ ಬೇಡಿಕೆಯಿಟ್ಟ ವಿಧಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅರ್ಜಿದಾರರಾದ ಮಮತಾ ಬ್ಯಾನರ್ಜಿ ಅವರ ಮೇಲೆ ದಂಡ ವಿಧಿಸಿದ ನ್ಯಾಯಮೂರ್ತಿಗಳು, ತದನಂತರ ತಮ್ಮ ಮುಂದೆ ಈ ಕೇಸಿನ ವಿಚಾರಣೆ ನಡೆಯಕೂಡದು ಎಂದು ಆದೇಶ ನೀಡಿದರು. (ಏಜೆನ್ಸೀಸ್)