ಕಲ್ಕತ್ತಾ: ನಾನು ಒಂದು ವೇಳೆ ವಿಷಕಾರಿ ಹಾವನ್ನು ನಂಬುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಕೇಸರಿ ಪಾಳಯವನ್ನು ನಂಬುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ಮಮತಾ, ಕೇಂದ್ರ ತನಿಖಾ ಸಂಸ್ಥೆಗಳು, ಬಿಎಸ್ಎಫ್ ಮತ್ತು ಸಿಐಎಸ್ಎಫ್ ಬಿಜೆಪಿಯ ಇಚ್ಛೆಯಂತೆ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ರಿಷಭ್ ಪಂತ್ಗೆ 24 ಲಕ್ಷ ರೂ. ದಂಡ, ನಿಷೇಧದ ಭೀತಿ
ದೇಶದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮಾದರಿ ನೀತಿ ಸಂಹಿತೆ (MCC)ಯನ್ನು ಪಾಲಿಸುತ್ತಿಲ್ಲ. ಒಂದು ವೇಳೆ ನಾನು ವಿಷಕಾರಿ ಹಾವನ್ನು ನಂಬುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಕೇಸರಿ ಪಾಳಯವನ್ನು ನಂಬುವುದಿಲ್ಲ. ಏಕೆಂದರೆ ಬಿಜೆಪಿ ದೇಶವನ್ನು ನಾಶ ಮಾಡುತ್ತಿದೆ. ಕೇಂದ್ರ ತನಿಖಾ ಸಂಸ್ಥೆಗಳು, ಬಿಎಸ್ಎಫ್ ಮತ್ತು ಸಿಐಎಸ್ಎಫ್ ಬಿಜೆಪಿಯ ಇಚ್ಛೆಯಂತೆ ಕೆಲಸ ಮಾಡುತ್ತಿವೆ. ಚುನಾವಣಾ ಆಯೋಗವು ಇದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಸರ್ಕಾರಿ ತನಿಖಾ ಸಂಸ್ಥೆಗಳ ಮೂಲಕ ನಮಗೆ ಬೆದರಿಕೆ ಹಾಕಿಸುತ್ತಿದ್ದು, ನಾವು ಇದ್ಯಾವುದಕ್ಕೆ ಜಗ್ಗುವುದಿಲ್ಲ. ರಾಜ್ಯದಲ್ಲಿ ಏಪ್ರಿಲ್ 19ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಬಿಎಸ್ಎಫ್ ಸಿಬ್ಬಂದಿ ಸ್ಥಳೀಯರನ್ನು ಹಿಂಸಿಸುತ್ತಿರುವ ಉದಾಹರಣೆಗಳಿದ್ದರೆ ದಯವಿಟ್ಟು ದೂರು ನೀಡಿ. ಕೇಂದ್ರೀಯ ಸಂಸ್ಥೆಗಳಾದ ಎನ್ಐಎ, ಆದಾಯ ತೆರಿಗೆ, ಬಿಎಸ್ಎಫ್ ಮತ್ತು ಸಿಐಎಸ್ಎಫ್ ಬಿಜೆಪಿಗಾಗಿ ಕೆಲಸ ಮಾಡುತ್ತಿವೆ. ಬಿಜೆಪಿ ಒಂದು ರಾಷ್ಟ್ರ, ಒಂದು ಪಕ್ಷ ಎಂಬ ತತ್ವವನ್ನು ಮಾತ್ರ ಅನುಸರಿಸುತ್ತದೆ ಎಂದು ಕಿಡಿಕಾರಿದ್ದಾರೆ.