ಮಂಗಳೂರು: ನಮಗೆ ಯಾವ ಸಂಬಂಧ ಇಲ್ಲ, ಇನ್ನು ನನ್ನ ಸುದ್ದಿಗೆ ಬರಬೇಡ, ಎಂದು ಗಿಫ್ಟ್ ಕೊಟ್ಟಿದ್ದ ಉಂಗುರವನ್ನು ಹಿಂದಿರುಗಿಸಿದ್ದ ಮಾಜಿ ಪ್ರಿಯತಮೆಯ ನಡೆಗೆ ಬೇಸತ್ತು ಆಕೆ ಹಾಗೂ ಆಕೆಯ ಮಿತ್ರರ ಮೇಲೆ ಚೂರಿ ಸಹಿತ ಮುಗಿಬಿದ್ದ ಪ್ರೇಮಿ ಹಾಗೂ ಆತನ ಚೇಲಾಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೋಳೂರು ಬೊಕ್ಕಪಟ್ಣದ ತ್ರಿಶೂಲ್ ಸಾಲ್ಯಾನ್(19), ಕೋಡಿಕಲ್ನ ಸಂತೋಷ್ ಪೂಜಾರಿ(19) ಹಾಗೂ ದಂಬೆಲ್ ಅಶೋಕನಗರದ ಡ್ಯಾನಿಶ್ ಆರಾನ್ ಡಿಕ್ರುಸ್(18) ಬಂಧಿತರು. ಆರೋಪಿ ತ್ರಿಶೂಲ್ ಪೂಜಾರಿಗೆ ಕ್ರಿಮಿನಲ್ ಹಿನ್ನೆಲೆಯಿದ್ದು ಆತನ ವಿರುದ್ಧ ಮಂಗಳೂರು ಉತ್ತರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ತ್ರಿಶೂಲ್ ಉರ್ವಾ ಠಾಣೆಯಲ್ಲಿ ರೌಡಿಶೀಟರ್ ಕೂಡಾ ಆಗಿದ್ದಾನೆ.
ಯುವತಿ ಮೂಲತಃ ಪುತ್ತೂರಿನವಳಾಗಿದ್ದು ಆಕೆಯ ತಂದೆ ತಾಯಿ ಕೆನಡಾದಲ್ಲಿ ವ್ಯಾಪಾರ ಮಾಡಿಕೊಂಡಿದ್ದಾರೆ. ಆಕೆ ನಗರದಲ್ಲಿ ಇದ್ದುಕೊಂಡು ನಗರದ ಶಾಲೆಯೊಂದರಲ್ಲಿ ಕಲಿಯುತ್ತಿದ್ದಳು. ಸದ್ಯ ಪುತ್ತೂರಿನ ಅಜ್ಜಿಮನೆಯಲ್ಲಿದ್ದಳು.
ತ್ರಿಶೂಲ್ ಹಾಗೂ ಆಕೆಗೆ ಪರಿಚಯವಾಗಿ ಸ್ನೇಹದಲ್ಲಿದ್ದರು. ಆದರೆ ಇತ್ತೀಚೆಗೆ ಆತನೊಂದಿಗೆ ಸ್ನೇಹಕಡಿದುಕೊಂಡಿದ್ದು, ಜ.30ರಂದು ಬಂಟ್ಸ್ಹಾಸ್ಟೆಲ್ಗೆ ಆತನನ್ನು ಕರೆಸಿ ಆತ ನೀಡಿದ್ದ ಉಂಗುರ ಸಹಿತ ಹಲವು ಉಡುಗೊರೆಗಳನ್ನು ಹಿಂದಿರುಗಿಸಿದ್ದಾಳೆ. ಆಗಲೇ ಸಿಟ್ಟಿಗೆದ್ದ ತ್ರಿಶೂಲ್ ಚೂರಿ ತೋರಿಸಿ ಜೀವಬೆದರಿಕೆಯೊಡ್ಡಿದ್ದ.
ಬಳಿಕ ಆಕೆ ಆಕೆಯ ಸ್ನೇಹಿತೆಯ ಜನ್ಮದಿನಾಚರಣೆಗೆ ನಗರದ ಬೆಂದೂರಿನಲ್ಲಿರುವ ರೆಸ್ಟೋರೆಂಟ್ಗೆ ಹೋಗಿದ್ದಾಳೆ. ತ್ರಿಶೂಲ್ ತನ್ನ ಮಿತ್ರರನ್ನು ಸೇರಿಸಿಕೊಂಡು ಅಲ್ಲಿಗೆ ಹೋಗಿದ್ದಾನೆ. ಅಲ್ಲಿ ಯುವತಿ, ಆಕೆಯ ಮಿತ್ರರ ಮೇಲೆ ಹೆಲ್ಮೆಟ್, ಚೂರಿಯಿಂದ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಯುವತಿಯ ಸ್ನೇಹಿತ ಪ್ರತೀಕ್ಷ್ ಎಂಬಾತನ ಮೇಲೆ ಚೂರಿ ಇರಿತದ ನಾಲ್ಕು ಗಾಯಗಳಾಗಿವೆ.
ಯುವತಿ ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.