ಅರಕಲಗೂಡು: ಪಟ್ಟಣದ ಗ್ರಂಥಾಲಯ ರಸ್ತೆ, ಕಸಬಾ ಹೋಬಳಿ ಮೋಕಲಿ, ಮುತ್ತಿಗೆ ಹಾಗೂ ಮಲ್ಲಿಪಟ್ಟಣ ಹೋಬಳಿಯ ಬೆಮ್ಮತ್ತಿ ಗ್ರಾಮವನ್ನು ಕಂಟೇನ್ಮೆಂಟ್ ವಲಯ ಎಂದು ಗುರುತಿಸಿ ಸೀಲ್ಡೌನ್ ಮಾಡಲಾಗಿದೆ.
ಒಟ್ಟು ನಾಲ್ವರಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ ಒಬ್ಬ ಬಿಎಂಟಿಸಿ ಬಸ್ ಚಾಲಕ, ಮತ್ತಿಬ್ಬರು ಕೆಎಸ್ಆರ್ಟಿಸಿ ಬಸ್ ಚಾಲಕರು ಹಾಗೂ ಮತ್ತೊಬ್ಬರು ಬೆಂಗಳೂರಿನಿಂದ ಬಂದವರು ಎನ್ನಲಾಗಿದೆ. ಎಲ್ಲರನ್ನೂ ಹಾಸನದ ಕೋವಿಡ್- 19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತರು ವಾಸಿಸುತ್ತಿದ್ದ ಸ್ಥಳಗಳಿಗೆ ಔಷಧ ಸಿಂಪಡಣೆ ಮಾಡುವ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ತಾಲೂಕಿನಲ್ಲಿ ಈವರೆಗೆ 27 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇವರಲ್ಲಿ 21 ಸೋಂಕಿತರು ಗುಣಮುಖರಾಗಿದ್ದಾರೆ. ಕೋವಿಡ್- 19 ಆಸ್ಪತ್ರೆಯಲ್ಲಿ 7 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ ತಿಳಿಸಿದರು.