ರಾಣೆಬೆನ್ನೂರ: ತಾಲೂಕಿನ ಹಲಗೇರಿ ಭಾಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮಟ್ಕಾ ದಂದೆ ನಿಲ್ಲಿಸಿದಿದ್ದರೆ ಮುಂದಿನ ವಾರ ಹಾವೇರಿಯ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಹಗಲು ರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಚ್ಚರಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ದಿನಗೂಲಿ ಮತ್ತು ಕೃಷಿ ಕಾರ್ಮಿಕ ಮಹಿಳಾ ಘಟಕದ ವತಿಯಿಂದ ಮಂಗಳವಾರ ಹಲಗೇರಿ ಠಾಣೆ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಮಟ್ಕಾ ದಂಧೆ ಬಡವರ ಬದುಕನ್ನು ಬೀದಿಗೆ ತಳ್ಳಿದೆ. ಈ ಅನಿಷ್ಠ ಮಟ್ಕಾ ದಂಧೆಯನ್ನು ಸಂಪೂರ್ಣ ನಿಷೇಧಿಸಬೇಕು. ಮಟ್ಕಾ ದಂಧೆಗೆ ದಾಸರಾಗಿರುವವರು ಮಹಿಳೆಯರ ಕೊರಳಲ್ಲಿನ ತಾಳಿಯೂ ಕೂಡಾ ಉಳಿಯದಂತೆ ಮಾಡಿದ್ದಾರೆ. ಸಾಲ ಸೂಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಆದ್ದರಿಂದ ಹಲಗೇರಿ ಭಾಗದಲ್ಲಿನ ಮಟ್ಕಾ ದಂಧೆ ಬಂದ್ ಮಾಡಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಹನುಮವ್ವ ದೇವರಮನಿ, ಶೈಲವ್ವ ಕಾಳೇರ, ಶೋಭಾ ಉಕ್ಕಂದ, ಬಸವ್ವ ಕುರುವತ್ತೆರ, ಚೈತ್ರಾ ಕುರವತ್ತೆರ, ಶೋಭಾ ಕಾಳೆ, ಶಾಂತವ್ವ ತಿಪ್ಪಜ್ಜೇರ, ಗಂಗವ್ವ ನಿಂಗಪ್ಪನವರ, ಮಲಕವ್ವ ತಿಪ್ಪಜ್ಜೇರ, ಹಾಲಮ್ಮ ದೇವರಮನಿ ಮತ್ತಿತರರು ಪಾಲ್ಗೊಂಡಿದ್ದರು.