ಬೆಳಗಾವಿ: ಡಾ.ಎಸ್.ರಾಧಾಕೃಷ್ಣನ್ ಅವರು ಶಿಕ್ಷಕ ವೃತ್ತಿಗೆ ಘನತೆ, ಗೌರವ ತಂದುಕೊಟಿದ್ದಾರೆ. ಶಿಕ್ಷಕರು ಸೇವಾ ಮನೋಭಾವದೊಂದಿಗೆ ವಿದ್ಯಾರ್ಥಿಗಳನ್ನು ರೂಪಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಸಲಹೆ ನೀಡಿದರು.
ಬೆಳಗಾವಿಯ ನರ್ಸಿಂಗ್ ಕಾಲೇಜ್ನ ಹಳೇ ವಿದ್ಯಾರ್ಥಿಗಳು ಪ್ರಸಕ್ತ ವಿದೇಶದಲ್ಲಿ ನೆಲೆಸಿರುವ ಅವರು ಆನ್ಲೈನ್ ಮೂಲಕ ಈಚೆಗೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ದೇಶಿಸಿ ಮಾತನಾಡಿ, ಶಿಕ್ಷಕರೆಂದರೆ ರಾಷ್ಟ್ರ ನಿರ್ಮಾಪಕರು ಎಂದರು. ಸಾಮಾನ್ಯ ಶಿಕ್ಷಕನಾದವನು ಕೇವಲ ಓದುತ್ತಾನೆ. ಒಳ್ಳೆಯ ಶಿಕ್ಷಕ ವಿವರಿಸುತ್ತಾನೆ. ಉತ್ತಮ ಶಿಕ್ಷಕ ಪ್ರಾತ್ಯಕ್ಷಿಕೆಗಳ ಮೂಲಕ ಕಲಿಸುತ್ತಾನೆ. ಅತ್ಯುತ್ತಮ ಶಿಕ್ಷಕನು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ, ಪ್ರೇರಣೆ ತುಂಬುತ್ತಾನೆ. ಆದರೆ, ವಿದ್ಯಾರ್ಥಿಗಳಲ್ಲಿ ಅಧ್ಯಯನ ಮಾಡಬೇಕೆಂಬ ಹಂಬಲವನ್ನುಂಟು ಮಾಡುವವನೇ ನಿಜವಾದ ಶಿಕ್ಷಕ. ಶಿಕ್ಷಕನಾದವನು ಮಾನವೀಯ ಮೌಲ್ಯ ಕಳೆದುಕೊಳ್ಳದೆ ಅವುಗಳನ್ನು ಅಂತರ್ಗತ ಮಾಡಿಕೊಳ್ಳಬೇಕು ಎಂದರು.
ವೃತ್ತಿ ಪ್ರೀತಿಸಿ: ಒಬ್ಬ ತಂದೆ ಕೆಟ್ಟರೆ ಒಂದು ಕುಟುಂಬ ಹಾಳಾಗುತ್ತದೆ. ಒಬ್ಬ ಇಂಜಿನಿಯರ್ ಕೆಟ್ಟರೆ ಒಂದು ಸೇತುವೆ ಹಾಳಾಗುತ್ತದೆ. ಒಬ್ಬ ವೈದ್ಯ ಕೆಟ್ಟವನಿದ್ದರೆ ರೋಗಿ ಸಾಯುತ್ತಾನೆ. ಅದೇ ಶಿಕ್ಷಕ ಕೆಟ್ಟರೆ ಜನಸಮೂಹ ಹಾಳಾಗುತ್ತದೆ. ಶಿಕ್ಷಕ ಶಿಕ್ಷಕನ ಹಾಗೇ ಇರಬೇಕು. ರಾಜಕಾರಣಿಯಾಗಲು ಹೋಗಬಾರದು.
ಒಮ್ಮೆ ಶಿಕ್ಷಕನಾದ ಮೇಲೆ ವೃತ್ತಿಯ ಘನತೆ, ಗೌರವ ಕಾಪಾಡಬೇಕು. ಶಿಕ್ಷಕರು ತಮ್ಮ ವೃತ್ತಿ ಪ್ರೀತಿಸಬೇಕು ಎಂದು ಡಾ. ಕೋರೆ ಹೇಳಿದರು. ಬೆಳಗಾವಿ ಕೆಎಲ್ಇಎಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ನ ಮಾಜಿ ಪ್ರಾಂಶುಪಾಲ ಸುರೇಶ ಸಲೇರ್, ಪ್ರೊ.ಉಷಾ ಜೋಶಿ, ಡಾ. ರಾಮಚಂದ್ರ ಹೂಲಿ, ರಾಜೀವ ಎಂ., ಈಶ್ವರ ಶೇಗುಣಶಿ, ನ್ಯೂಜಿಲೆಂಡ್ನ ಗಣಪತಿ ಪಾಟೀಲ ಆನ್ಲೈನ್ ಕಾರ್ಯಕ್ರಮ ಆಯೋಜಿಸಿದ್ದರು.
ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಮಾಜಿ ನಿರ್ದೇಶಕ ಕರ್ನಲ್ ಎ.ಕೆ. ಸಿಂಗ್, ಸುಧಾ ರೆಡ್ಡಿ ಹಾಗೂ 100ಕ್ಕೂ ಹೆಚ್ಚು ಎನ್ಆರ್ಐ ಹಳೆಯ ವಿದ್ಯಾರ್ಥಿಗಳು ಮತ್ತು ಯುಎಸ್, ಯುಕೆ, ಸ್ವಿಟ್ಜಲೆರ್ಂಡ್, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ದುಬೈ, ಇಥಿಯೋಪಿಯಾ ನ್ಯೂಜಿಲೆಂಡ್ ಮತ್ತು ಭಾರತದ ವಿವಿಧ ರಾಜ್ಯಗಳಿಂದ 2000ಕ್ಕೂ ಹೆಚ್ಚು ಪ್ರತಿನಿಧಿಗಳು ಆನ್ಲೈನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.