ಚಿಂಚೋಳಿ: ತಾಲೂಕಿನಲ್ಲಿ ಚಿಲ್ಲರೆ ಕಾಟ ಹೆಚ್ಚಾಗಿದೆ. ಜನರು ಹಾಗೂ ವ್ಯಾಪಾರಸ್ಥರು ನಿತ್ಯ 10 ರೂ. ಹಾಗೂ 20 ರೂ. ನೋಟಿಗಾಗಿ ಪರದಾಡುವಂತಾಗಿದೆ.
ಸುಲೇಪೇಟದಲ್ಲಿ ಪ್ರತಿ ಶುಕ್ರವಾರ ವಾರದ ಸಂತೆ ನಡೆಯುತ್ತದೆ. ಇದು ತಾಲೂಕಿನಲ್ಲೇ ದೊಡ್ಡ ಹಾಗೂ ಪ್ರಸಿದ್ಧ ಸಂತೆಯಾಗಿದೆ. ಸುತ್ತಮುತ್ತಲಿನ ಸುಮಾರು 30ಕ್ಕೂ ಅಧಿಕ ಗ್ರಾಮೀಣ ಪ್ರದೇಶದ ಜನರು ವಾರದ ಸಂತೆಗೆ ಬರುತ್ತಾರೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಚಿಲ್ಲರೆ ಸಮಸ್ಯೆ ತಲೆದೂರಿದೆ. ಎಲ್ಲರೂ 500 ಹಾಗೂ 100 ರೂ., 200 ರೂ.ಗಳ ನೋಟ್ ನೀಡುತ್ತಿದ್ದಾರೆ. ಆದರೆ ವಾಪಸ್ ಕೊಡಲು ಚಿಲ್ಲರೆ ಇಲ್ಲದಂತಾಗಿದೆ. ಚಿಲ್ಲರೆ ಹಣದ ವಹಿವಾಟು ಹೆಚ್ಚಾಗಿದ್ದು, ಬ್ಯಾಂಕ್ನಿಂದ ಚಿಲ್ಲರೆ ಹಣ ಬರುತ್ತಿಲ್ಲ. ಇದು ಸಮಸ್ಯೆ ದ್ವಿಗುಣಗೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರವು ಮಾರುಕಟ್ಟೆಗೆ 10 ರೂ. ಮತ್ತು 20 ರೂ. ಮುಖ ಬೆಲೆಯ ನೋಟ್ಗಳನ್ನು ಬಿಡುಗಡೆ ಮಾಡಬೇಕು. ಇದರಿಂದ ಜನರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂಬುದು ವ್ಯಾಪಾರಸ್ಥರ ಆಗ್ರಹವಾಗಿದೆ.
ಜನ ಸಾಮಾನ್ಯರು, ಬಡವರು, ಕೂಲಿ ಕಾರ್ಮಿಕರು ನಿತ್ಯವು 10 ರೂ. ಮತ್ತು 20 ರೂ. ನೋಟಿಗಾಗಿ ಪರದಾಡುವಂತಾಗಿದೆ. ಕೂಡಲೇ ಜಿಲ್ಲಾ ಮಟ್ಟದ ಲೀಡ್ ಬ್ಯಾಂಕ್ ಅಧಿಕಾರಿಗಳು ಗಮನಹರಿಸಿ ಹೊಸ ನೋಟುಗಳನ್ನು ಮಾರುಕಟ್ಟೆಗೆ ಬಿಡಬೇಕು. ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು.
| ವೆಂಕಟೇಶ, ಸುಲೇಪೇಟ ಗ್ರಾಮಸ್ಥ