ಚಿಕ್ಕೋಡಿ: ಬೆಂಗಳೂರಿನ ಕೆಂಗೇರಿಯಿಂದ ಚಿಕ್ಕೋಡಿಯವರೆಗೆ ಕಾಲ್ನಡಿಗೆಯಲ್ಲಿ ಬಂದ ಉತ್ತರ ಪ್ರದೇಶ ಮೂಲದ 13 ಕಾರ್ಮಿಕರನ್ನು ಚಿಕ್ಕೋಡಿ ಪೊಲೀಸರು ಮಂಗಳವಾರ ಇಲ್ಲಿನ ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿಯ ಪ್ರವಾಸಿ ಮಂದಿರದ ಬಳಿಯ ಚೆಕ್ಪೋಸ್ಟ್ನಲ್ಲಿ ತಡೆ ಹಿಡಿದಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಇವರು, ಲಾಕ್ಡೌನ್ ಘೋಷಣೆಯಿಂದ ಊಟ, ಉಪಾಹಾರ ಸಿಗದೇ ಸಂಕಷ್ಟ ಅನುಭವಿಸುತ್ತಿದ್ದರು. ಹೇಗಾದರೂ ಸ್ವ-ಗ್ರಾಮಕ್ಕೆ ತೆರಳಬೇಕು ಎಂಬ ಉದ್ದೇಶದಿಂದ ಕಾಲ್ನಡಿಗೆ ಮೂಲಕ ಪ್ರಯಾಣ ಬೆಳೆಸಿದ್ದಾರೆ. 600 ಕಿ.ಮೀ. ಕ್ರಮಿಸಿ ಚಿಕ್ಕೋಡಿಗೆ ಆಗಮಿಸಿದ್ದಾರೆ.
ಚೆಕ್ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಪೋಲಿಸರು ಯುವಕರನ್ನು ವಿಚಾರಿಸಿದಾಗ, ತಾವು ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಹೊರಟಿರುವುದಾಗಿ ತಿಳಿಸಿದ್ದಾರೆ. ಯಾವುದೇ ರೀತಿಯ ಪಾಸ್, ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಮಾನವೀಯತೆ ಮೆರೆದ ಪಿಎಸ್ಐ: ಕಾರ್ಮಿಕರನ್ನು ವಿಚಾರಣೆ ನಡೆಸಿದ ಚಿಕ್ಕೋಡಿ ಪಿಎಸ್ಐ ರಾಕೇಶ ಬಗಲಿ ಅವರು ಊಟೋಪಚಾರದ ವ್ಯವಸ್ಥೆ ಕಲ್ಪಿಸಿದರು. ಅಲ್ಲದೆ, ತಹಸೀಲ್ದಾರ್ ಕಚೇರಿ ಸಿಬ್ಬಂದಿಯನ್ನು ಕರೆಯಿಸಿ 13 ಜನರಿಗೂ ಪಾಸ್ ವ್ಯವಸ್ಥೆ ಕಲ್ಪಿಸಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ. ಪಾಸ್ ಲಭ್ಯವಾಗುವರೆಗೂ ಸ್ಥಳೀಯ ವಸತಿ ನಿಲಯದಲ್ಲಿಯೇ ಕ್ವಾರಂಟೈನ್ ಮಾಡಿದ್ದಾರೆ.