ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿಮಾನಿಗಳು ಜೀವ ಬೆದರಿಕೆ ಒಡ್ಡುತ್ತಿದ್ದಾರೆಂದು ಆರೋಪಿಸಿ, ಕ್ರಮಕೈಗೊಳ್ಳುವಂತೆ ವಂದೇ ಮಾತರಂ ಸಮಾಜ ಸಂಸ್ಥೆಯ ಅಧ್ಯಕ್ಷ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ನಟ ಸುದೀಪ್ ಇತ್ತೀಚೆಗಷ್ಟೇ ರಮ್ಮಿ ಆಡಿ ಆಟ ಗೆಲ್ಲಿ ಎಂಬ ಜಾಹೀರಾತ್ತಿನಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಇಸ್ಪೀಟ್ ಆಡಲು ಪ್ರಚೋದನೆ ನೀಡುತ್ತಿದ್ದಾರೆ. ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಿ ಎಂದು ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ನಾಯ್ಕ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.
ದೂರಿನ ಬಳಿಕ ನನಗೀಗ ಸಾಕಷ್ಟು ಬೆದರಿಕೆ ಕರೆ ಮತ್ತು ಸಂದೇಶಗಳು ಬರುತ್ತಿವೆ. ವಾಟ್ಸ್ಆ್ಯಪ್ನಿಂದ ಮಸೇಜ್ ಮಾಡಿ ಹಾಗೂ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಆಸ್ಟ್ರೇಲಿಯಾ, ಥಾಯ್ಲೆಂಡ್ ಹಾಗೂ ಸಿಂಗಾಪುರ ಸೇರಿದಂತೆ ವಿದೇಶದಿದಂಲೂ ಕೊಲೆ ಬೆದರಿಕೆ ಬರುತ್ತಿವೆ ಎಂದು ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ.
ನನಗೆ ಮಾನಸಿಕ ಹಾಗೂ ದೈಹಿಕ ಹಲ್ಲೆಯಾದರೆ ಸುದೀಪ್ ಅವರೇ ನೇರ ಹೊಣೆ. ನನ್ನ ಪ್ರಾಣಕ್ಕೆ ಕುತ್ತು ಬಂದರೆ ಸುದೀಪ್ ಕಾರಣ. ತಕ್ಷಣ ನಟ ಸುದೀಪ್ ತಮ್ಮ ಅಭಿಮಾನಿಗಳಿಗೆ ತಿಳಿ ಹೇಳಬೇಕು. ಇದನ್ನು ನಿರ್ಲಕ್ಷ್ಯ ಮಾಡಿದ್ದಲ್ಲಿ ನಟ ಸುದೀಪ್ ಅವರ ಮನೆಯ ಮುಂದೆ ಧರಣಿ ಮಾಡುವುದಾಗಿ ಶಿವಕುಮಾರ್ ನಾಯ್ಕ್ ಪತ್ರದ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)