ಬೆಂಗಳೂರು: ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಟೀಕಿಸುವ ಭರದಲ್ಲಿ ರಂಗಕರ್ಮಿಗಳು, ಕಲಾವಿದರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಮಾನಿಸಿದ್ದಾರೆ ಎಂದು ಬಿಜೆಪಿ ಕಲಾವಿದರು, ಸಾಂಸ್ಕೃತಿಕ ಪ್ರಕೋಷ್ಠ ಆಕ್ಷೇಪಿಸಿದೆ.
ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಪ್ರಕೋಷ್ಠ ನಿಯೋಗ ಶನಿವಾರ ಈ ಕುರಿತು ದೂರು ಸಲ್ಲಿಸಿದೆ. ಉತ್ತರಕನ್ನಡ ಲೋಕಸಭೆ ಕ್ಷೇತ್ರದ ಮುಂಡಗೋಡದಲ್ಲಿ ಏರ್ಪಡಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುವಾಗ ‘ಮೋದಿ ಒಳ್ಳೆಯ ನಾಟಕಕಾರ’ ಎಂದು ಹೇಳಿದ್ದರ ಬಗ್ಗೆ ಪ್ರಕಟಿತ ಪತ್ರಿಕಾ ವರದಿ ತುಂಡು ಲಗತ್ತಿಸಿದೆ.
ಸಾಂವಿಧಾನಿಕ ಸ್ಥಾನದ ಜವಾಬ್ದಾರಿಯಲ್ಲಿರುವ ಮುಖ್ಯಮಂತ್ರಿಗಳು ಕಲಾವಿದರಿಗೆ ಅವಮಾನ ಮಾಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದೆ. ಈ ನಿಯೋಗದಲ್ಲಿ ಪ್ರಕೋಷ್ಠದ ರಾಜ್ಯ ಸಂಚಾಲಕ ಗಣೇಶರಾವ್ ಕೇಸರ್ಕರ್, ಸಹ ಸಂಚಾಲಕ ವಿಕ್ರಂ ಸೂರಿ, ಹಿರಿಯ ಮುಖಂಡ ದತ್ತಗುರುಹೆಗ್ಡೆ, ರಂಗಕರ್ಮಿಗಳಾದ ಪ್ರಸನ್ನ ಕುಮಾರ್, ಪುನೀತ್, ಅಜಿತ್ ಬಸಾಪುರ್, ಕಲಾವಿದರಾದ ರಜನಿಕಾಂತ್, ಗೀತಾ, ಅಭಿಷೇಕ್ ಕೊಡಿಯಲ್ ಇನ್ನಿತರರು ಇದ್ದರು.