ಕಾನಹೊಸಹಳ್ಳಿ: ಗುಡೇಕೋಟೆ ಗ್ರಾಮದ ಹಾನಗಲ್ ಕ್ರಾಸ್ ಬಳಿ ಪಡಿತರ ಅಕ್ಕಿಯನ್ನು ಆಕ್ರಮವಾಗಿ ಸಾಗಣೆ ಮಾಡುತ್ತಿದ್ದ ವಾಹನ ಸಮೇತ ಇಬ್ಬರನ್ನು ಶನಿವಾರ ವಶಕ್ಕೆ ಪಡೆದು 243 ಚೀಲ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ.
ಪಡಿತರವನ್ನು ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿದ ಆರೋಪಿಗಳು, ಸಂಡೂರು ತಾಲೂಕಿನ ಬೊಮ್ಮಘಟ್ಟ ಗ್ರಾಮದಿಂದ ತುಂಬಿಕೊಂಡು ಗುಡೇಕೋಟೆ ಮಾರ್ಗವಾಗಿ ತುಮಕೂರಿನ ಓಂಕಾರ ರೈಸ್ ಮಿಲ್ಗೆ ಸಾಗಣೆ ಮಾಡಲೆಂದು ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಗುಡೇಕೋಟೆ ಪೊಲೀಸರು ಮತ್ತು ಕೂಡ್ಲಿಗಿ ಅಹಾರ ಇಲಾಖೆಯ ಸಿಬ್ಬಂದಿ ಸೇರಿ ದಾಳಿ ಮಾಡಿ ಪಡಿತರ ಅಕ್ಕಿ ಮತ್ತು ವಾಹನ ಜಪ್ತಿ ಮಾಡಿದ್ದಾರೆ.
ಲಾರಿ ಚಾಲಕ ಅದಿಲ್ಬಾಷಾ(32), ವ್ಯಾಪಾರಿ ಸುರೇಶ(35) ಎಂಬುವರ ವಿರುದ್ಧ ಆಹಾರ ಇಲಾಖೆಯ ನಿರೀಕ್ಷಕ ಗೀತಾಂಜನೇಯ್ಯ ನೀಡಿದ ದೂರಿನಂತೆ ಗುಡೇಕೋಟೆ ಠಾಣೆಯಲ್ಲಿ ಶನಿವಾರ ತಡರಾತ್ರಿ ಪ್ರಕರಣ ದಾಖಲಾಗಿದೆ. ಗುಡೇಕೋಟೆ ಪಿಎಸ್ಐ ಮಾಲಿಕ್ ಸಾಬ್ ಕಲಾರಿ ಮತ್ತು ಸಿಬ್ಬಂದಿ ಶಶಿಧರ್, ಚಂದ್ರಮೌಳಿ, ಗುರುಸ್ವಾಮಿ, ಬಸವರಾಜ್ ಆಹಾರ ನಿರೀಕ್ಷಕ ಗೀತಾಂಜನೇಯ್ಯ ಇದ್ದರು.