ಕೊಚ್ಚಿ: ಒಬ್ಬರನ್ನೊಬ್ಬರು ಕಳೆದುಕೊಳ್ಳುತ್ತೇವೆಂಬ ಭಯದಲ್ಲಿ ಯುವತಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಆರ್ಯ ಅಶೋಕ್ (21) ಮತ್ತು ಅಮೃತಾ ಅನಿಲ್ (21) ಮೃತ ಯುವತಿಯರು. ಇಬ್ಬರು ಸಹ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು.
ಕಳೆದ ಶನಿವಾರ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಪಾಲಕರ ದೂರಿನ ಮೇರೆಗೆ ಸಾಕಷ್ಟು ಹುಡುಕಾಟ ನಡೆಸಿದ ಬಳಿಕ ಇಬ್ಬರ ಮೃತದೇಹ ಕೊಟ್ಟಾಯಂನಲ್ಲಿರುವ ನದಿಯಲ್ಲಿ ಪತ್ತೆಯಾಗಿತ್ತು. ಇಬ್ಬರು ಸಾವಿಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಆದರೆ, ಪ್ರಾಥಮಿಕ ತನಿಖೆಯ ಪ್ರಕಾರ ಇಬ್ಬರಲ್ಲಿ ಒಬ್ಬಳಿಗೆ ಮದುವೆ ನಿಶ್ಚಯ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮೊದಲ ವಿವಾಹ ವಾರ್ಷಿಕೋತ್ಸವ ಜತೆಗೆ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಯ ಖುಷಿ ಕಿತ್ತುಕೊಂಡ ಘೋರ ವಿಧಿ!
ಶನಿವಾರ ಇಬ್ಬರು ಕೊಟ್ಟಾಯಂಗೆ ತೆರಳಿದ್ದಾರೆ. ಅದಕ್ಕೂ ಮುನ್ನ ಡಿಗ್ರಿ ಪ್ರಮಾಣ ಪತ್ರ ಪಡೆದುಕೊಳ್ಳಲು ಕಾಲೇಜಿಗೆ ಹೋಗಿ ಬರುವುದಾಗಿ ಪಾಲಕರಿಗೆ ಹೇಳಿದ್ದರು. ಆದರೆ, ಹೋದವರು ಮರಳಿ ಬರದಿದ್ದಾಗ ಕೊಲ್ಲಂನಲ್ಲಿರುವ ಚದಯಮಂಗಳಂ ಪೊಲೀಸ್ ಠಾಣೆಯಲ್ಲಿ ಯುವತಿಯ ಪಾಲಕರು ನಾಪತ್ತೆ ದೂರು ದಾಖಲಿಸಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ಕೊಟ್ಟಾಯಂನ ವೈಕುಂ ಠಾಣಾ ಪೊಲೀಸರು ಮೃತದೇಹಗಳನ್ನು ಮುರಿಂಜಪುಳ ನದಿಯಲ್ಲಿ ವಶಕ್ಕೆ ಪಡೆದಿದ್ದರು.
ಶನಿವಾರ ಯಾರೋ ನದಿಗೆ ಹಾರಿದ್ದನ್ನು ನೋಡಿದ್ದಾಗಿ ಪ್ರತ್ಯಕ್ಷದರ್ಶಿಗಳು ನೀಡಿದ ವರದಿಯ ಪ್ರಕಾರ ತೀವ್ರ ಶೋಧ ಕಾರ್ಯ ನಡೆಸಿದಾಗ ಯುವತಿಯರ ಮೃತದೇಹಗಳು ಪತ್ತೆಯಾಗಿವೆ. ಅಲ್ಲದೆ, ಇಬ್ಬರ ಚಪ್ಪಲಿಗಳು ಸಹ ನದಿಯ ಸೇತುವೆ ಬಳಿ ಪತ್ತೆಯಾಗಿವೆ. ಬಳಿಕ ಮೃತದೇಹಗಳನ್ನು ನಾಪತ್ತೆ ದೂರು ದಾಖಲಿಸಿದ್ದ ಪಾಲಕರು ಮುಂದೆ ತೋರಿಸಿದಾಗ ಅವರ ಮಕ್ಕಳೆಂಬುದು ಖಚಿತವಾಗಿದ್ದು, ಮೃತದೇಹಗಳನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿ ಶವಪರೀಕ್ಷೆಯ ಬಳಿಕ ಪಾಲಕರಿಗೆ ಹಸ್ಥಾಂತರಿಸಲಾಗಿದೆ.
ಮೂಲಗಳ ಪ್ರಕಾರ ಅಮೃತಾ ಮನೆಯಲ್ಲಿ ಮದುವೆ ನಿಶ್ಚಯ ಮಾಡಿದ್ದರಂತೆ. ಮದುವೆಯ ನಂತರ ಇಬ್ಬರು ಬೇರೆ ಬೇರೆಯಾಗುತ್ತೇವೆ ಎಂಬ ಭಯದಲ್ಲಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಆತ್ಮೀಯ ಗೆಳತಿಯರಾಗಿದ್ದ ಇಬ್ಬರು ಮದುವೆ ನಂತರ ಒಬ್ಬರನ್ನೊಬ್ಬರು ಕಳೆದುಕೊಳ್ಳುತ್ತೇವೆ ಎಂಬ ಭಯದಲ್ಲಿ ಹೀಗೆ ಮಾಡಿಕೊಂಡಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ, ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. (ಏಜೆನ್ಸೀಸ್)
ಇದನ್ನೂ ಓದಿ: ರಾಜ್ಯದಲ್ಲಿ ಇನ್ಮುಂದೆ ಆನ್ಲೈನ್ ಗೇಮ್ ಆಡಂಗಿಲ್ಲ! ಗೃಹ ಸಚಿವರು ಕೊಟ್ಟ ಸುಳಿವು ಇಲ್ಲಿದೆ
ಕಸಿನ್ಗಳ ಮದುವೆ ಕಾನೂನು ಬಾಹಿರ; ಹರಿಯಾಣ, ಪಂಜಾಬ್ ಹೈ ಕೋರ್ಟ್ ಆದೇಶ